ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನ (ಮಾಹೆ) ಎರಡು ಸಾಕ್ಷ್ಯಚಿತ್ರಗಳು ಕೇರಳದ ತ್ರಿಶೂರಿನಲ್ಲಿ ನಡೆಯುವ ಅಂತಾರಾಷ್ಟ್ರೀಯ ಜಾನಪದ ಚಿತ್ರೋತ್ಸವ (ಐಎಫ್ಎಫ್ಎಫ್) 8ನೇ ಆವೃತ್ತಿಗೆ ಅಧಿಕೃತವಾಗಿ ಆಯ್ಕೆಯಾಗಿದೆ.
ಐಎಫ್ಎಫ್ಎಫ್ ಜಾನಪದ ಚಿತ್ರೋತ್ಸವ ಪ್ರತಿಷ್ಠಿತ ಜಾಗತಿಕ ಕಾರ್ಯಕ್ರಮವಾಗಿದ್ದು, ಅದು ಸಿನಿಮಾ ಮೂಲಕ ಜಾನಪದ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂಭ್ರಮಿಸುವ ಉತ್ಸವವಾಗಿದೆ. ಈ ಬಾರಿಯ ಚಿತ್ರೋತ್ಸವಕ್ಕೆ ಜಗತ್ತಿನಾದ್ಯಂತದ ಸುಮಾರು 800 ಚಿತ್ರಗಳು ಪ್ರವೇಶಪತ್ರವನ್ನು ಕಳುಹಿಸಿವೆ. ಸಂಘಟಕರು ಜಾನಪದ-ಆಧರಿತ ಕಥಾನಿರೂಪಣೆಯ ಸಮೃದ್ಧ ವೈವಿಧ್ಯತೆ ಇರುವ 200 ಚಿತ್ರಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಿದ್ದಾರೆ.
ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಯಾದ ಮಾಹೆಯ ಎರಡು ಜಾನಪದ ಆಧರಿತ ಸಾಕ್ಷ್ಯಚಿತ್ರವೆಂದರೆ ‘ಪಿಲಿವೇಷ ಆಫ್ ತುಳುನಾಡು’ ಮತ್ತು ‘ಸತ್ಯದ ಸಿರಿ: ಎ ವುಮನ್ಸ್ ಟೇಲ್’. ಇವು ಪ್ರಾದೇಶಿಕ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದ ಪ್ರೇಕ್ಷಕರಿಗೆ ತಲುಪಿಸುವ ಮಾಹೆಯ ಪ್ರಯತ್ನವಾಗಿದೆ ಎಂದು ಮಾಹೆ ಪ್ರಕಟಣೆಯಲ್ಲಿ ತಿಳಿಸಿದೆ.
ಕೇರಳದ ತ್ರಿಶೂರಿನಲ್ಲಿ ನಡೆಯುವ ಅಂತಾರಾಷ್ಟ್ರೀಯ ಜಾನಪದ ಚಿತ್ರೋತ್ಸವ (ಐಎಫ್ಎಫ್ಎಫ್) 8ನೇ ಆವೃತ್ತಿಗೆ ‘ಪಿಲಿವೇಷ ಆಫ್ ತುಳುನಾಡು’, ‘ಸತ್ಯದ ಸಿರಿ’ ಅಧಿಕೃತವಾಗಿ ಆಯ್ಕೆಯಾಗಿದೆ.
2025ರ ಜನವರಿ 10ರಿಂದ 15ರ ನಡುವೆ ಮಾಹೆಯ ಎರಡು ಸಾಕ್ಷ್ಯಚಿತ್ರಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ. ಈ ಚಿತ್ರೋತ್ಸವವನ್ನು ತ್ರಿಶೂರಿನ ಅಂತಾರಾಷ್ಟ್ರೀಯ ಚಿತ್ರೋತ್ಸವ ಇಂಟರ್ನ್ಯಾಶನಲ್ ಫೆಸ್ಟಿವಲ್ ಆಫ್ ತ್ರಿಶೂರ್-ಐಎಫ್ಎಫ್ಟಿ, ಭೌಮನ್ ಸೋಶಿಯಲ್ ಇನೀಶಿಯೇಟಿವ್, ತ್ರಿಶೂರಿನ ಸೆಂಟ್ ಥಾಮಸ್ ಕಾಲೇಜಿನ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ಮತ್ತು ಇಂಟರ್ನ್ಯಾಶನಲ್ ಫೋಕ್ ಫಿಲ್ಮ್ ಇಂಡಿಯಾ ಆಯೋಜಿಸುತ್ತಿವೆ.
ಪಿಲಿವೇಷ ಆಫ್ ತುಳುನಾಡು ಚಿತ್ರ ತುಳುನಾಡಿನಲ್ಲಿ ಆಳವಾಗಿ ಬೇರೂರಿರುವ ಪಿಲಿವೇಷ ಸಂಪ್ರದಾಯದ ಕುರಿತಾಗಿದೆ. ಪಿಲಿವೇಷ ತುಳುನಾಡಿನ ಸಾಂಸ್ಕೃತಿಕ ಅನನ್ಯತೆಯ ಒಂದು ಸಾಂಕೇತಿಕ ಮತ್ತು ಕಲಾತ್ಮಕ ಆಚರಣೆಯಾಗಿದೆ. ಅನನ್ಯವಾಗಿರುವ ಕಲಾತ್ಮಕ ಅಭಿವ್ಯಕ್ತಿಯನ್ನು ಉಳಿಸಿಕೊಳ್ಳುವ ಜೊತೆಗೆ ವಿವಿಧ ಸಮುದಾಯಗಳ ನಡುವೆ ಸಾಮರಸ್ಯ ಮತ್ತು ಏಕತೆಯನ್ನು ಪ್ರೇರೇಪಿಸುವಲ್ಲಿ ಪಿಲಿವೇಷದ ಮಹತ್ವವನ್ನು ಈ ಚಿತ್ರ ಎತ್ತಿ ಹಿಡಿಯುತ್ತದೆ.
‘ಸತ್ಯದ ಸಿರಿ, ‘ಎ ವುಮನ್ಸ್ ಟೇಲ್’ ಕಿರುಚಿತ್ರವು ನಂಬಿಕೆ ಮತ್ತು ಆಧ್ಯಾತ್ಮಿಕತೆ ಕುರಿತ ಭಾವಪೂರ್ಣ ಕಥನವಾಗಿದ್ದು, ವ್ಯಕ್ತಿಗತ ನಂಬಿಕೆಯ ಪದ್ಧತಿ ಮತ್ತು ಸಮಷ್ಟಿಯ ಯೋಗಕ್ಷೇಮದ ಗಾಢ ಸಂಬಂಧವನ್ನು ಇದು ಪ್ರತಿಫಲಿಸುತ್ತದೆ. ಸತ್ಯದ ಸಿರಿ: ಎ ವುಮನ್ಸ್ ಟೇಲ್ ಕಿರುಚಿತ್ರಕ್ಕೆ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ಲಭಿಸಿದ್ದು ಆಸ್ಟ್ರೇಲಿಯಾ ಪರ್ತ್ನ ಮಲ್ಟಿಕಲ್ಟರಲ್ ಫಿಲ್ಡ್ ಫೆಸ್ಟಿವಲ್-2024ರಲ್ಲಿ ಮತ್ತು ಬಾಂಗ್ಲಾದೇಶದ ಢಾಕಾದ ಸಿನೆಮೇಕಿಂಗ್ ಫಿಲ್ಮಫೆಸ್ಟಿವಲ್-2023ರಲ್ಲಿ ಪ್ರದರ್ಶನವನ್ನು ಕಂಡಿದೆ. ಈ ಎರಡು ಸಾಕ್ಷ್ಯಚಿತ್ರಗಳನ್ನು ಸೆಂಟರ್ ಇಂಟರ್ಕಲ್ಬರಲ್ ಸ್ಟಡೀಸ್ ಆ್ಯಂಡ್ ಡೈಲಾಗ್ (ಸಿಐಎಸ್ಡಿ) ಸಂಯೋಜಕರಾದ ಡಾ.ಪ್ರವೀಣ್ ಕೆ.ಶೆಟ್ಟಿ ಮತ್ತು ಸಂಶೋಧನ ಸಹಾಯಕರಾದ ನಿತೇಶ್ ಅಂಚನ್ ಅವರು ನಿರ್ದೇಶಿಸಿದ್ದಾರೆ. ಇವು ಮಾಹೆಯ ‘ಡಿಸರ್ನಿಂಗ್ ಇಂಡಿಯ: ಲಿವಿಂಗ್ ಕಲ್ಟರ್ಸ್ ಆಫ್ ತುಳುನಾಡು’ ಎಂಬ ಯೋಜನೆಯ ಭಾಗಗಳಾಗಿವೆ. 2021ರಲ್ಲಿ ಆರಂಭವಾಗಿರುವ ಈ ಯೋಜನೆಯು ಆನ್ಸೆನ್ ಕೋರ್ಸ್ ಮೂಲಕ ಉಡುಪಿ, ದಕ್ಷಿಣಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡಿರುವ ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟಕ್ಕೆ ತಲುಪಿಸುವ ಗುರಿ ಹೊಂದಿದೆ.