ನವದೆಹಲಿ: ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆ ಸೋಮವಾರ ಲೋಕಸಭೆಯಲ್ಲಿ ಮಂಡನೆಯಾಗಲಿದೆಯಾ ಎಂಬ ಬಗ್ಗೆ ಕುತೂಹಲವಿದೆ.
ಸಂವಿಧಾನ (ನೂರ ಇಪ್ಪತ್ತೊಂಬತ್ತನೇ ತಿದ್ದುಪಡಿ) ಮಸೂದೆ 2024 ಎಂದು ಅಧಿಕೃತವಾಗಿ ಕರೆಯಲ್ಪಡುವ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಯು ಸೋಮವಾರ ಲೋಕಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆಗಳಿಲ್ಲ ಎಂದು ತಿಳಿದು ಬಂದಿದೆ. ಲೋಕಸಭೆಯ ಸೋಮವಾರದ ಪರಿಷ್ಕೃತ ಕಲಾಪ ಪಟ್ಟಿಯಲ್ಲಿ ಮಸೂದೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲದಿರುವುದು ಈ ಸಂಶಯ ಮೂಡಲು ಕಾರಣ.
ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ ಕಾಯ್ದೆ, 1963, ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ ಸರ್ಕಾರ ಕಾಯ್ದೆ, 1991 ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ, 2019 ಅನ್ನು ತಿದ್ದುಪಡಿ ಮಾಡಲು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆ, 2024 ಈ ಎಲ್ಲ ಮಸೂದೆಗಳನ್ನು ಕೂಡ ಅರ್ಜುನ್ ರಾಮ್ ಮೇಘವಾಲ್ ಸೋಮವಾರ ಮಂಡಿಸಬೇಕಿತ್ತು.
ಮೊದಲ ತಿದ್ದುಪಡಿ ಮಸೂದೆಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದು ಮತ್ತು ಮತ್ತೊಂದು ಮಸೂದೆ ದೆಹಲಿ, ಜಮ್ಮು ಮತ್ತು ಕಾಶ್ಮೀರ ಮತ್ತು ಪುದುಚೇರಿಯ ವಿಧಾನಸಭೆಗಳಿಗೆ ಚುನಾವಣೆಗಳ ದಿನಾಂಕಗಳನ್ನು ಹೊಂದಿಸುವ ಉದ್ದೇಶ ಹೊಂದಿತ್ತು.
ಆರಂಭದಲ್ಲಿ ಸೋಮವಾರದ ಲೋಕಸಭೆ ಕಲಾಪ ಪಟ್ಟಿಯಲ್ಲಿ ಮಸೂದೆ ಮಂಡನೆಯನ್ನು ನಿಗದಿಪಡಿಸಲಾಗಿತ್ತು. “… ಅರ್ಜುನ್ ರಾಮ್ ಮೇಘವಾಲ್ ಅವರು ಭಾರತದ ಸಂವಿಧಾನವನ್ನು ಮತ್ತಷ್ಟು ತಿದ್ದುಪಡಿ ಮಾಡುವ ಮಸೂದೆ ಮಂಡಿಸಲು ಅನುಮತಿಗಾಗಿ ಅರ್ಜಿ ಸಲ್ಲಿಸಲಿದ್ದಾರೆ. ಜೊತೆಗೆ ಮಸೂದೆಯನ್ನು ಮಂಡಿಸಲಿದ್ದಾರೆ” ಎಂದು ಮೊದಲ ಕಲಾಪ ಪಟ್ಟಿಯಲ್ಲಿ ತಿಳಿಸಲಾಗಿತ್ತು.
ಈಗ, ಪರಿಷ್ಕೃತ ಕಲಾಪ ಪಟ್ಟಿಯಲ್ಲಿ ಇದರಲ್ಲಿನ ಯಾವುದೇ ಮಸೂದೆಗಳನ್ನು ಉಲ್ಲೇಖಿಸದ ಕಾರಣ ಒಂದು ರಾಷ್ಟ್ರ, ಒಂದು ಚುನಾವಣಾ ಮಸೂದೆಯು ಸೋಮವಾರ ಮಂಡನೆಯಾಗಲಾರದು ಎಂದು ಊಹಿಸಲಾಗಿದೆ. ವೇಳಾಪಟ್ಟಿಯ ಪ್ರಕಾರ ಪ್ರಸಕ್ತ ಅಧಿವೇಶನವು ಡಿಸೆಂಬರ್ 20ರಂದು ಕೊನೆಗೊಳ್ಳಲಿದೆ.
ಹೀಗಾಗಿ ಈ ಮಸೂದೆಗಳನ್ನು ಈ ವಾರದ ಕೊನೆಯಲ್ಲಿ ಮಂಡಿಸಬಹುದು ಅಥವಾ ಸ್ಪೀಕರ್ ಅವರ ಅನುಮತಿಯೊಂದಿಗೆ ‘ಕಲಾಪದ ಪೂರಕ ಪಟ್ಟಿ’ಯ ಮೂಲಕ ಸರ್ಕಾರ ಯಾವುದೇ ಕ್ಷಣದಲ್ಲಾದರೂ ಈ ತಿದ್ದುಪಡಿ ಮಸೂದೆಗಳನ್ನು ಮಂಡಿಸಬಹುದು ಎಂದು ಮೂಲಗಳು ತಿಳಿಸಿವೆ.
ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತಾದ ವರದಿ ಸಿದ್ಧಪಡಿಸಿದೆ.
ದೇಶದಲ್ಲಿ ದೀರ್ಘಕಾಲದವರೆಗೆ ನಡೆಯುವ ಚುನಾವಣೆಗಳಿಂದ ಉಂಟಾಗುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಸಮಿತಿಯು ಮಾರ್ಚ್ನಲ್ಲಿ ತನ್ನ ವರದಿಯನ್ನು ಸಲ್ಲಿಸಿದೆ.
ಗುರುವಾರ, ಕೇಂದ್ರ ಸಚಿವ ಸಂಪುಟವು ಸಂವಿಧಾನ (ನೂರ ಇಪ್ಪತ್ತೊಂಬತ್ತು ತಿದ್ದುಪಡಿ) ಮಸೂದೆ, 2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ ಮಸೂದೆ) 2024 ಅನ್ನು ಅಂಗೀಕರಿಸಿದೆ. ಸಂಪುಟದ ಈ ನಿರ್ಣಯಗಳನ್ನು ಶುಕ್ರವಾರ ಸಂಜೆ ಸಂಸದರಿಗೆ ನೀಡಲಾಗಿದೆ.
ವರದಿಯನ್ನು ಕ್ಯಾಬಿನೆಟ್ ಅನುಮೋದಿಸಿದ ನಂತರ ಹಲವಾರು ವಿರೋಧ ಪಕ್ಷದ ನಾಯಕರು ಈ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಅಪ್ರಾಯೋಗಿಕ ಮತ್ತು ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ ಎಂದು ಪ್ರತಿಪಕ್ಷಗಳ ನಾಯಕರು ಹೇಳಿದ್ಧಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣಾ ಮಸೂದೆ’ ಪರಿಚಯಿಸುವ ಸರ್ಕಾರದ ಯೋಜನೆಗಳ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದರು.
ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದರಿಂದ ನೀತಿ ನಿಯಮಾವಳಿಗಳನ್ನು ರೂಪಿಸುವಲ್ಲಿ ಸ್ಥಿರತೆಯನ್ನು ಖಚಿತಪಡಿಸಬಹುದು, ಮತದಾರರ ಆಯಾಸವನ್ನು ನಿವಾರಿಸಬಹುದು ಮತ್ತು ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಬಹುದು ಎಂದು ವರದಿ ಸೂಚಿಸಿದೆ.
18,626 ಪುಟಗಳ ವರದಿಯನ್ನು 191 ದಿನಗಳಲ್ಲಿ ಸಿದ್ಧಪಡಿಸಲಾಗಿದ್ದು, ಮಧ್ಯಸ್ಥಗಾರರು ಮತ್ತು ತಜ್ಞರೊಂದಿಗೆ ವ್ಯಾಪಕ ಚರ್ಚೆಗಳ ನಂತರ ಇದನ್ನು ತಯಾರಿಸಲಾಗಿದೆ.