Bangalore / Belagavi:
ಉತ್ತರ ಕರ್ನಾಟಕಕ್ಕೆ ರಾಜಕೀಯವಾಗಿಯೂ ಅನ್ಯಾಯವಾಗಿದೆ. ಉತ್ತರ ಕರ್ನಾಟಕಕ್ಕಿಂತ ದಕ್ಷಿಣ ಕರ್ನಾಟಕದಲ್ಲಿ ಹೆಚ್ಚು ಜನಪ್ರತಿನಿಧಿಗಳಿದ್ದಾರೆ ಎಂದು ಸದನದಲ್ಲಿ ಬಿಜೆಪಿ ಶಾಸಕ ಯತ್ನಾಳ್ ಪ್ರಸ್ತಾಪಿಸಿದರು.ಸಚಿವ ಸಂಪುಟ ಸಭೆಯಲ್ಲಿರುವ ಸಚಿವರಲ್ಲೂ ಮೂರ್ನಾಲ್ಕು ಮಂದಿಯಷ್ಟೇ ಚರ್ಚೆಯಲ್ಲಿ ತೊಡಗಿಸಿಕೊಳ್ಳುತಾರೆ.
ಉಳಿದವರು ಮೌನಿಗಳು. ಸುವರ್ಣಸೌಧವನ್ನು ಕೋಟ್ಯಂತರ ರೂ. ಖರ್ಚು ಮಾಡಿ ಕಟ್ಟಿಸಲಾಗಿದೆ. ಯಾವ ಕಚೇರಿಯೂ ಇಲ್ಲಿಗೆ ಸ್ಥಳಾಂತರಗೊಂಡಿಲ್ಲ. ಕೃಷ್ಣಾ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಇಲ್ಲಿಗೆ ಪ್ರವಾಸಕ್ಕೆ ಬಂದಂತೆ ಬಂದು ಹೋಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.ವಿಧಾನಸಭೆ ಕಲಾಪದಲ್ಲಿ ಇಂದು ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ದಕ್ಷಿಣ ಕರ್ನಾಟಕದ ವಿಚಾರವಾಗಿ ಅಸಹನೆ ವ್ಯಕ್ತಪಡಿಸುತ್ತಿಲ್ಲ. ಆದರೆ ಸಮಾನ ಅಭಿವೃದ್ಧಿ ಆಗಬೇಕು. ಗ್ಯಾರಂಟಿ ನೀಡುವ ಬದಲಾಗಿ ನೀರಾವರಿ ಕಲ್ಪಿಸಿ ಎಲ್ಲಾ ಕೈಗಳಿಗೆ ಉದ್ಯೋಗ ಕೊಡಿ.
ಉತ್ತರ ಕರ್ನಾಟಕ ಭಾಗಕ್ಕೆ ತನ್ನದೇ ಆದ ವೈಭೋಗವಿದೆ. ಕರಾವಳಿ ಭಾಗಕ್ಕೆ ಹೆಚ್ಚು ಆದಾಯ ಇದೆ. ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಬರಕ್ಕೆ ತುತ್ತಾಗಿ ತುತ್ತು ಅನ್ನಕ್ಕೂ ಪರದಾಡುವಂತಹ ಪರಿಸ್ಥಿತಿಯಲ್ಲಿರುವ ಕುಟುಂಬಗಳಿವೆ ಎಂದು ಹೇಳಿದರು. ಸಂಸದರ ಪೈಕಿ ನಮ್ಮಲ್ಲಿ 12 ಮಂದಿ ಇದ್ದರೆ ದಕ್ಷಿಣ ಕರ್ನಾಟಕದಲ್ಲಿ 16 ಮಂದಿ ಇದ್ದಾರೆ.
ವಿಧಾನ ಪರಿಷತ್ ಸದಸ್ಯರ ಪೈಕಿ ದಕ್ಷಿಣ ಕರ್ನಾಟಕದಲ್ಲಿ 53 ಮಂದಿ ಇದ್ದರೆ, ಉತ್ತರ ಕರ್ನಾಟಕದಲ್ಲಿ 22 ಸದಸ್ಯರು ಇದ್ದಾರೆ. ರಾಜ್ಯಸಭಾ ಸದಸ್ಯರ ಪೈಕಿ 16 ಮಂದಿ ದಕ್ಷಿಣ ಕರ್ನಾಟಕ ಭಾಗದವರು, ಉತ್ತರ ಕರ್ನಾಟಕದಲ್ಲಿ ಇಬ್ಬರು ಮಾತ್ರ ಇದ್ದಾರೆ. ಮತ ಹಾಕುವವರು ನಾವು, ಅಧಿಕಾರ ಅನುಭವಿಸುವವರು ಆ ಭಾಗದ ಜನ ಎಂಬಂತಾಗಿದೆ ಎಂದರು.
ದಕ್ಷಿಣ ಕರ್ನಾಟಕದಲ್ಲಿ 17 ಜಿಲ್ಲೆಗಳಿದ್ದರೆ, ಉತ್ತರ ಕರ್ನಾಟಕ ಭಾಗದಲ್ಲಿ 14 ಜಿಲ್ಲೆಗಳಿವೆ. ಇನ್ನೂ ನಾಲ್ಕೈದು ಜಿಲ್ಲೆಗಳು ಹೆಚ್ಚುವರಿಯಾಗಿ ವಿಂಗಡಣೆಯಾಗಬೇಕಿದೆ. ನಮ್ಮ ಭಾಗದಲ್ಲಿ 96 ಮಂದಿ ಶಾಸಕರಿದ್ದರೆ, ದಕ್ಷಿಣ ಕರ್ನಾಟಕದಲ್ಲಿ 121 ಶಾಸಕರಿದ್ದಾರೆ. ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಅಜಗಜಾಂತರ ವ್ಯತ್ಯಾಸಗಳಿವೆ.
ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ಕಾನೂನು, ವೈದ್ಯಕೀಯ ಆಸ್ಪತ್ರೆಗಳು ಎಲ್ಲದರಲ್ಲೂ ದಕ್ಷಿಣ ಕರ್ನಾಟಕವೇ ಮೇಲುಗೈ ಸಾಧಿಸಿದೆ ಎಂದು ತಿಳಿಸಿದರು.ಕಂದಾಯ ಗ್ರಾಮಗಳಲ್ಲೂ ಅನ್ಯಾಯವಾಗಿದೆ. ದಕ್ಷಿಣ ಕರ್ನಾಟಕದಲ್ಲಿ 21,160 ಗ್ರಾಮಗಳಿದ್ದರೆ, ಉತ್ತರ ಕರ್ನಾಟಕದಲ್ಲಿ 9,571 ಗ್ರಾಮಗಳಿವೆ. ಅಲ್ಲಿ 3,364 ಗ್ರಾಮ ಪಂಚಾಯಿತಿಗಳಿದ್ದರೆ, ಉತ್ತರ ಕರ್ನಾಟಕ ಭಾಗದಲ್ಲಿ 2,792 ಗ್ರಾಮ ಪಂಚಾಯಿತಿಗಳಿವೆ.
Yatnal Revenge:
ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡುತ್ತಿದ್ದ ವೇಳೆ ಕಾಂಗ್ರೆಸ್ ಶಾಸಕ ಕೋನರೆಡ್ಡಿ ಅವರು, ಯತ್ನಾಳ್ ಅವರು ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಭೇಟಿ ಮಾಡಿರುವ ಕುರಿತು ಲೇವಡಿ ಮಾಡಿದರು. ಆಗ ನಾನು ಯಾವುದೇ ಫ್ಲಾಟ್ ಮಂಜೂರು ಮಾಡಿಸಿಕೊಳ್ಳಲು ಹೋಗಿರಲಿಲ್ಲ ಎಂದು ಯತ್ನಾಳ್ ತಿರುಗೇಟು ನೀಡಿದರು.
ನಾವು ಮುಗ್ಧರು ಎಂದು ಯತ್ನಾಳ್ ಹೇಳಿದಾಗ, ನಿಮನ್ನು ಮುಗ್ಧರು ಎಂದು ಹೇಳಲು ಸಾಧ್ಯವೇ? ಎಂದು ಸುನಿಲ್ ಕುಮಾರ್ ಛೇಡಿಸಿದರು. ನಾವು ಕರಾವಳಿ ಭಾಗದವರಂತೆ ಬುದ್ಧಿವಂತರಲ್ಲ ಎಂದು ಯತ್ನಾಳ್ ಮತ್ತೊಮೆ ಹೇಳಿದಾಗ, ಬುದ್ಧಿವಂತರು ಎಂದು ಹೇಳಿ ದಡ್ಡರನ್ನಾಗಿ ಮಾಡಲಾಗುತ್ತಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹಾಸ್ಯಚಟಾಕಿ ಹಾರಿಸಿದರು.
ಶಿಕ್ಷಣ, ಕೈಗಾರಿಕೆ, ನೀರಾವರಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಆಗ್ರಹಿಸಿದರು.ಅಭಿವೃದ್ಧಿಯ ಬಗ್ಗೆ ಮುಖ್ಯಮಂತ್ರಿಯಾದವರಿಗೆ ಸ್ಪಷ್ಟ ಕಲ್ಪನೆ ಇರಬೇಕು. ನಾನು ಕೇಂದ್ರದಲ್ಲಿ ಸಚಿವರಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದೇನೆ ಎನ್ನುತ್ತಿದ್ದಂತೆ ಎಂ.ಬಿ.ಪಾಟೀಲ್ ಮಧ್ಯಪ್ರವೇಶಿಸಿದರು. ನಾನು ರಾಜ್ಯ ಸಚಿವನಿಗಿಂತಲೂ ಹೆಚ್ಚು ಪ್ರಭಾವಿ ಇದ್ದೇನೆ.
ಮಂತ್ರಿಯಾಗಿ ನಿಮ್ಮ ರೀತಿ ಅಸಹಾಯಕನಾಗಿರುವುದಿಲ್ಲ. ನಂಜುಂಡಪ್ಪ ವರದಿ ಹಿಂದುಳಿದ ಪ್ರದೇಶಗಳನ್ನು ಸ್ಪಷ್ಟವಾಗಿ ಗುರುತಿಸಿತ್ತು. ಮಹಾರಾಷ್ಟ್ರದಲ್ಲಿ ಶಿವಾಜಿ ಮಹಾರಾಜರನ್ನು ತೋರಿಸುವಂತೆ ಕರ್ನಾಟಕದಲ್ಲೂ ಇಮ್ಮಡಿ ಪುಲಿಕೇಶಿ ಅವರನ್ನು ಗೌರವಿಸಬೇಕು ಹಾಗೂ ರಾಜ್ಯದ ರಾಯಭಾರಿ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು. ಚಾಲುಕ್ಯರು, ಹೊಯ್ಸಳರು, ರಾಷ್ಟ್ರಕೂಟರು, ಅಮೋಘವರ್ಷ ಸೇರಿದಂತೆ ರಾಜ, ಮಹಾರಾಜರು ಆಡಳಿತ ನಡೆಸಿರುವ ಉತ್ತರ ಕರ್ನಾಟಕ ಭಾಗದ ಬಹುತೇಕ ರಾಜ-ಮಹಾರಾಜರು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರೆ.