ದೇಶದಲ್ಲಿ ಅಷ್ಟೊಂದು ಜನಪ್ರಿಯತೆ ಪಡೆಯದ ಪ್ರಮುಖ ಪ್ರವಾಸಿ ತಾಣಗಳನ್ನು ಜಾಗತಿಕವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಅದರ ಅಡಿಯಲ್ಲಿ 23 ರಾಜ್ಯಗಳಲ್ಲಿ 3,295 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ 40 ಯೋಜನೆಗಳಿಗೆ ಅನುಮೋದನೆ ನೀಡಿದೆ. ಅಂತೆಯೇ ಕರ್ನಾಟಕ ಪ್ರವಾಸೋದ್ಯ ಇಲಾಖೆಗೆ 99.17 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ.
ಜಾಗತಿಕ ದರ್ಜೆಗೆ ಅನುಗುಣವಾಗಿ ಪ್ರವಾಸಿ ತಾಣಗಳ ಅಭಿವೃದ್ದಿಗೆ ಕೇಂದ್ರ ಈ ಹಣ ಬಿಡುಗಡೆ ಮಾಡಿದೆ. ಬೆಂಗಳೂರಿನ ತಾತಾಗುಣಿಯ ರೋರಿಚ್, ದೇವಿಕಾರಾಣಿ ಎಸ್ಟೇಟ್ (Roerich and Devikarani Estate) ಅಭಿವೃದ್ದಿಗೆ ಹಣ ನೀಡಿದೆ. 23 ರಾಜ್ಯಗಳ 40 ಸ್ಥಳಗಳ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿದೆ ಎಂದು ಕೇಂದ್ರ ಸಚಿವ ಗಜೇಂದ್ರಸಿಂಗ್ ಶೇಖಾವತ್ ತಿಳಿಸಿದ್ದಾರೆ.
ದೇಶದ ಐಕಾನಿಕ್ ಪ್ರವಾಸೋದ್ಯಮ ಕೇಂದ್ರಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದು ಗುರಿಯಾಗಿದೆ. ಅವುಗಳನ್ನು ಜಾಗತಿಕವಾಗಿ ಬ್ರ್ಯಾಂಡ್ ಮತ್ತು ಮಾರುಕಟ್ಟೆ ಮಾಡಲು ರಾಜ್ಯಗಳಿಗೆ 50 ವರ್ಷಗಳ ದೀರ್ಘಾವಧಿಯ ಬಡ್ಡಿರಹಿತ ಸಾಲ ನೀಡಲು ನಿರ್ಧರಿಸಿದೆ.
ಯೋಜನೆಗಳಿಗೆ ಬಂಡವಾಳ ಹೂಡಿಕೆ ಉತ್ತೇಜನ, ಸ್ಥಳೀಯ ಆರ್ಥಿಕತೆಯ ಅಭಿವೃದ್ಧಿ ಮತ್ತು ಸುಸ್ಥಿರ ಪ್ರವಾಸೋದ್ಯಮ ಯೋಜನೆಗಳ ಮೂಲಕ ಉದ್ಯೋಗಾವಕಾಶ ಸೃಷ್ಟಿಸುವ ಗುರಿ ಹೊಂದಲಾಗಿದೆ.