ಬೆಳಗಾವಿ: ಬಸವಣ್ಣನವರಿಗೆ ಅಪಮಾನ ಮಾಡಿರುವ ಶಾಸಕ ಯತ್ನಾಳ್ ವಿರುದ್ಧ ರಾಜ್ಯ ಸರ್ಕಾರ ಸ್ವ-ಇಚ್ಛೆಯಿಂದ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ವಿಶ್ವಗುರು ಬಸವಣ್ಣನವರ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ, ಬೆಳಗಾವಿಯಲ್ಲಿ ವಿವಿಧ ಲಿಂಗಾಯತ ಪರ ಸಂಘಟನೆಗಳ ಪದಾಧಿಕಾರಿಗಳು ಇಂದು ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಬಸವದಳ, ಲಿಂಗಾಯತ ಸಂಘಟನೆ, ಜಾಗತಿಕ ಲಿಂಗಾಯತ ಮಹಾಸಭಾ, ಚನ್ನಬಸವ ಫೌಂಡೇಶನ್, ಬಸವ ಕಾಯಕ ಜೀವಿಗಳ ಸಂಘ, ಹಡಪದ ಸಮಾಜದ ವತಿಯಿಂದ ನಗರದ ಚೆನ್ನಮ್ಮ ವೃತ್ತದಲ್ಲಿ ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಲಿಂಗಾಯತ ವಿರೋಧಿ ಯತ್ನಾಳ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ, ನೂಕಾಟ, ತಳ್ಳಾಟ ಕೂಡ ನಡೆಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಲಿಂಗಾಯತ ಮುಖಂಡ ಶಂಕರ ಗುಡಸ ಮಾತನಾಡಿ, ಯತ್ನಾಳ್ಗೆ ಲಿಂಗಾಯತ ಧರ್ಮದ ಸಂಸ್ಕಾರ, ವಚನ ಸಾಹಿತ್ಯದ ಗಂಧ ಗಾಳಿಯೂ ಇಲ್ಲ. ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡಿದ ಪ್ರತಿಯೊಬ್ಬರೂ ಹಾಳಾಗಿ ಹೋಗಿದ್ದಾರೆ. ಅಧಿವೇಶನದೊಳಗೆ ಕ್ಷಮೆ ಕೇಳದಿದ್ದರೆ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರಿಗೆ ಅಪಮಾನ ಮಾಡಿರುವ ಯತ್ನಾಳ್ ವಿರುದ್ಧ ರಾಜ್ಯ ಸರ್ಕಾರ ಸ್ವ-ಇಚ್ಛೆಯಿಂದ ಕೇಸ್ ದಾಖಲಿಸಬೇಕು. ಶಾಸಕ ಸ್ಥಾನವನ್ನು ರದ್ದುಪಡಿಸುವಂತೆ ಆಗ್ರಹಿಸಿದರು. ನಂತರ ಯತ್ನಾಳ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಡಳಿತ ಮೂಲಕ ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಮನವಿ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಸತ್ಯಕ್ಕ ಮಾತಾಜಿ, ಬಸವಣ್ಣನವರು ಹೊಳೆ ಹಾರಿದ್ದನ್ನು ಯತ್ನಾಳ್ ನೋಡಿದ್ದರೇನು? ಹೀಗೆ ಹೇಳುವ ಯತ್ನಾಳ್ ಇದಕ್ಕೆ ಸಾಕ್ಷಿ ತೆಗೆದುಕೊಂಡು ಬರಬೇಕು. ಬಸವಣ್ಣ ಹೇಡಿ ಆಗಿರಲಿಲ್ಲ. ‘ನಾಳೆ ಬಪ್ಪುದು ನಮಗಿಂದೇ ಬರಲಿ, ಇಂದು ಬಪ್ಪುದು ನಮಗೆ ಈಗಲೇ ಬರಲಿ’ ಎಂದವರು. ಶಾಸಕ ಸ್ಥಾನದಿಂದ ಯತ್ನಾಳ್ ಅವರನ್ನು ತಕ್ಷಣ ವಜಾಗೊಳಿಸಬೇಕು. ಇನ್ಮುಂದೆ ಲಿಂಗಾಯತ ಧರ್ಮದ ಶಾಸಕ ಎಂದು ಅವರನ್ನು ಯಾರೂ ಕರೆಯಬಾರದು. ವಿನಾಕಾರಣ ಹೇಳಿಕೆ ನೀಡುವುನ್ನು ಬಿಟ್ಟು, ವಚನ ಸಾಹಿತ್ಯ ಓದಿ ಬುದ್ಧಿ ಕಲಿಯಲಿ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಲಿಂಗಾಯತ ಮುಖಂಡರಾದ ಬಸವರಾಜ ರೊಟ್ಟಿ, ಅಶೋಕ ಬೆಂಡಿಗೇರಿ, ಕೆ.ಬಸವಪ್ರಸಾದ, ಮಹಾಂತೇಶ ಗುಡಸ, ಈರಣ್ಣ ದಯನ್ನವರ, ಸೂರ್ಯಕಾಂತ ಭಾಂವಿ, ಪ್ರೇಮ್ ಚೌಗುಲಾ, ವಂದನಾ ಬಾಬಾನಗರ, ಸುಶೀಲಾ ಲಿಂಗಾಯತ ಸೇರಿ ಮತ್ತಿತರರು ಇದ್ದರು.