ಕೊಪ್ಪಳ: ಅಕ್ಟೋಬರ್ 28, 2014 ರಂದು ಗಂಗಾವತಿ ತಾಲೂಕಿನ ಮರುಕುಂಬಿ ಗ್ರಾಮದಲ್ಲಿ ನಡೆದ ಜಾತಿ ಸಂಘರ್ಷ ಪ್ರಕರಣದಲ್ಲಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, ತಲಾ ಐದು ಸಾವಿರ ರೂ. ದಂಡ ಹಾಗೂ ಮೂರು ಅಪರಾಧಿಗಳಿಗೆ ಐದು ವರ್ಷ ಜೈಲು ಹಾಗೂ 2 ಸಾವಿರ ರೂಪಾಯಿ ದಂಡ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಐತಿಹಾಸಿಕ ಆದೇಶ ಹೊರಡಿಸಲಾಗಿದೆ.
ಜಾತಿ ಸಂಘರ್ಷ ಪ್ರಕರಣದಲ್ಲಿ 101 ಜನರ ವಿರುದ್ಧ ತೀರ್ಪಿನ ಆದೇಶ ಬಂದ ದೇಶದ ಮೊದಲ ಪ್ರಕರಣ ಇದಾಗಿದೆ.
ಮರುಕುಂಬಿ ಗ್ರಾಮದಲ್ಲಿ 2014 ರಲ್ಲಿ ಕ್ಷೌರದಂಗಡಿಗೆ ಮತ್ತು ಹೋಟೆಲ್ ನಲ್ಲಿ ದಲಿತರಿಗೆ ಪ್ರವೇಶ ನೀಡದೆ ಇರುವ ಕುರಿತು ಗಲಾಟೆ ನಡೆದಿತ್ತು. ಇದಾದ ಮೇಲೆ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದರು.
ಗಂಗಾವತಿಯಲ್ಲಿ ಮರಕುಂಬಿ ಗ್ರಾಮದ ಕೆಲ ಸರ್ವಣಿಯರು ಸಿನಿಮಾ ನೋಡಲು ಹೋದಾಗ ದಲಿತ ಯುವಕರು ಗಲಾಟೆ ನಡೆಸಿದ್ದರು.
ದಲಿತ ಕೇರಿಗೆ ನುಗ್ಗಿ ಗುಡಿಸಲಿಗೆ ಬೆಂಕಿ ಹಚ್ಚಿದ ಮೇಲೆ ಸುಮಾರು ಮೂರು ತಿಂಗಳ ಕಾಲ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಇದಾದ ಮೇಲೆ ಕಳೆದ 10ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆದು ಶಿಕ್ಷೆ ಪ್ರಕಟವಾಗಿದೆ.
ಕೋರ್ಟ್ಗೆ ಹಾಜರುಪಡಿಸುತ್ತಿದ್ದ ವೇಳೆ ನ್ಯಾಯಾಲಯದ ಅವರಣದಲ್ಲಿ ಜಮಾಯಿಸಿದ್ದ ಸಂಬಂಧಿಕರು, ಮನೆಯವರನ್ನು ಕಂಡು ಕಣ್ಣೀರು ಹಾಕಿದರು. ಪತಿ, ಮಕ್ಕಳು, ತಂದೆಯನ್ನು ಕಂಡು ಸಂಬಂಧಿಗಳು ಗದ್ಗತಿತರಾದರು. ಮನೆಯವರನ್ನು ಕಂಡ ಆರೋಪಿಗಳು ಕೂಡ ಕಣ್ಣೀರಿಡುತ್ತಾ ಕೋರ್ಟ್ ನೊಳಗೆ ತೆರಳಿದರು. ರಾತ್ರಿಯ ನಂತರ ಅಪರಾಧಿಗಳನ್ನು ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಯಿತು.