ಬೆಂಗಳೂರು: ಡಿಸೆಂಬರ್ನಲ್ಲಿ ಸುರಿದ ಚಂಡಮಾರುತದ ಮಳೆಯು ಅತ್ಯಂತ ಅಗತ್ಯ ವಸ್ತುಗಳಾದ ತರಕಾರಿಗಳ ಪೂರೈಕೆಗೆ ಅಡ್ಡಿಯಾಗಿದೆ. ಅಬ್ಬರದ ಮಳೆಯಿಂದಾಗಿ ಟೊಮೆಟೊ ಬೆಳೆಗಳು ಮತ್ತು ಸ್ಥಳೀಯವಾಗಿ ಬೆಳೆಯುವ ಈರುಳ್ಳಿಯ ಗುಣಮಟ್ಟಕ್ಕೂ ಹಾನಿಯಾಗಿದೆ.
ಕಳಪೆ ಪೂರೈಕೆಯಿಂದಾಗಿ ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ. ತರಕಾರಿಗಳ ಗುಣಮಟ್ಟ ಕುಸಿದಿದ್ದು, ಚಿಲ್ಲರೆ ವ್ಯಾಪಾರಿಗಳು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಅವರು ಹೇಳುತ್ತಾರೆ. ಬೆಳ್ಳುಳ್ಳಿಯ ಬೆಲೆ ಒಂದು ಕೆಜಿಗೆ 530- 550 ರೂಪಾಯಿ ಮತ್ತು ಅಗತ್ಯ ಕೊತ್ತಂಬರಿ ಮತ್ತು ಕರಿಬೇವಿನ ಸೊಪ್ಪುಗಳು ಕ್ರಮವಾಗಿ ರೂ 98- 155 ಮತ್ತು ರೂ 135ರಷ್ಟಿದೆ.
ಮಳೆಯಿಂದಾಗಿ ಬೆಳೆಗೆ ಹಾನಿಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಟೊಮೇಟೊ ಬೆಲೆ ಕೆಜಿಗೆ 60-65 ರಿಂದ 90 ರೂಪಾಯಿಗೆ ಏರಲಿದೆ ಎಂದು ವ್ಯಾಪಾರಿಗಳು ಮತ್ತು ಟೊಮೆಟೊ ಬೆಳೆದಿರುವ ರೈತರು ಹೇಳಿದ್ದಾರೆ.
ಸಾಮಾನ್ಯವಾಗಿ ಬೇಸಿಗೆಯ ತೀವ್ರತೆಯಿಂದಾಗಿ ಏಪ್ರಿಲ್-ಮೇ ತಿಂಗಳುಗಳಲ್ಲಿ ಟೊಮ್ಯಾಟೊ ಬೆಲೆ ಏರುತ್ತದೆ. ಆದರೆ ಈ ಬಾರಿ, ಮಳೆ ಮತ್ತು ಮೋಡ ಕವಿದ ವಾತಾವರಣ ಮತ್ತು ಅಸಮರ್ಪಕ ಚಳಿಗಾಲದ ಕಾರಣ, ಬಿತ್ತನೆ ಮತ್ತು ಕೊಯ್ಗಿಗೆ ಅಡ್ಡಿಯಾಗಿದ್ದು ದರಗಳು ಏರಿಕೆಯಾಗುತ್ತವೆ ಎಂದು ರೈತ ನಾರಾಯಣ ಗೌಡ ಹೇಳಿದರು.
ಹವಾಮಾನ ವೈಪರೀತ್ಯದಿಂದಾಗಿ ಕಳೆದ 4-5 ದಿನಗಳಲ್ಲಿ ಹಣ್ಣುಗಳು ಮತ್ತು ತರಕಾರಿಗಳ ನಿಯಮಿತ ಪೂರೈಕೆಯಲ್ಲಿ ತೀವ್ರವಾಗಿ ಪರಿಣಾಮ ಬೀರಿದೆ ಎಂದು HOPCOMS ನ ಅಧಿಕಾರಿಗಳು ತಿಳಿಸಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರದ ರೈತರಿಂದ ಬೆಂಗಳೂರಿಗೆ ಹಣ್ಮು-ತರಕಾರಿಗಳು ಪೂರೈಕೆಯಾಗುತ್ತವೆ.
ಸರಬರಾಜಿಗೆ ತುಮಕೂರು ಎರಡನೇ ಆದ್ಯತೆಯ ಸ್ಥಳವಾಗಿದೆ. ಎಲ್ಲಾ ಪ್ರದೇಶಗಳಿಂದ ಸರಬರಾಜು ಕಳಪೆಯಾಗಿದೆ. ಇದು ಪ್ರಮಾಣ ಮತ್ತು ಗುಣಮಟ್ಟ ಮಾತ್ರವಲ್ಲ, ಪೂರೈಕೆ ಸರಪಳಿಯು ಕಳಪೆಯಾಗಿದೆ ಎಂದು ಅಧಿಕಾರಿ ಹೇಳಿದರು.
ನಾನು ಪ್ರತಿದಿನವೂ ಉತ್ತಮ ಗುಣಮಟ್ಟದ ಟೊಮೆಟೊ ಮತ್ತು ತರಕಾರಿಗಳನ್ನು ಹುಡುಕುತ್ತಿದ್ದೇನೆ. ಅಂಗಡಿಗಳಲ್ಲಿ ಖರೀದಿ ಮಾಡುವಲ್ಲಿ ಸಾಕಷ್ಟು ಸಮಯ ಹಿಡಿಯುತ್ತವೆ. ಆನ್ಲೈನ್ ಪ್ಲಾಟ್ಫಾರ್ಮ್ಗಳ ಮೂಲಕ ಖರೀದಿಸುವ ತರಕಾರಿಗಳ ಗುಣಮಟ್ಟವೂ ಕಳಪೆಯಾಗಿದೆ ಎಂದು ಗೃಹಿಣಿ ಶುಭಾ ಎಂಬುವರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.
ಮಹಾರಾಷ್ಟ್ರದಿಂದ ಉತ್ತಮ ಗುಣಮಟ್ಟದ ಬಿಳಿ ಬಣ್ಣದ ಈರುಳ್ಳಿ ಕರ್ನಾಟಕದ ಮಾರುಕಟ್ಟೆಗೆ ಇನ್ನೂ ಬಂದಿಲ್ಲ. ಪೂರೈಕೆಯ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ದರಗಳು ಹೆಚ್ಚಾಗಲಿವೆ. ಅವರೆಕಾಯಿ ಇನ್ನೂ ಮಾರುಕಟ್ಟೆಗೆ ಬಂದಿಲ್ಲ ಮತ್ತು ಬೆಳೆಯಲ್ಲಿ ತೀವ್ರವಾಗಿ ಪರಿಣಾಮ ಬೀರಿದೆ. ಸದ್ಯದ ದರ ಪ್ರತಿ ಕೆಜಿಗೆ 95- 110 ರೂ.ಗಳಾಗಿದ್ದು, ಮುಂದಿನ ದಿನಗಳಲ್ಲಿ ಇದು ಏರಿಕೆಯಾಗಲಿದೆ.
ಈರುಳ್ಳಿ ವ್ಯಾಪಾರಿಗಳೂ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ರವಿಶಂಕರ್ ಮಾತನಾಡಿ, ಪ್ರಸ್ತುತ ಈರುಳ್ಳಿ ಪೂರೈಕೆಗೆ ಯಾವುದೇ ತೊಂದರೆ ಇಲ್ಲ. ಏಕೆಂದರೆ ಸ್ಥಳೀಯವಾಗಿ ಬೆಳೆದ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತದೆ. ಆದರೆ ಗಾಢ ಕೆಂಪು ಬಣ್ಣದ ಈರುಳ್ಳಿಗಳಿಗೆ ಹೆಚ್ಚಿನ ನೀರಿನ ಅಂಶ ಬೇಕಾಗುತ್ತದೆ. ಹೀಗಾಗಿ ಗುಣಮಟ್ಟದ ವಿಷಯದಲ್ಲಿ ಕಳವಳಕಾರಿಯಾಗಿದೆ ಎಂದರು.
ಇಂದಿನ ತರಕಾರಿಗಳ ದರ ಪ್ರತಿ ಕೆಜಿ ಗೆ
* ಈರುಳ್ಳಿ – 100
* ಬದನೆಕಾಯಿ – 56
* ಸೌತೆಕಾಯಿ – 28
* ಡಬಲ್ ಬೀನ್ಸ್ – 120
* ಮೂಲಂಗಿ – 70
* ನುಗ್ಗೆಕಾಯಿ – 540
* ಕ್ಯಾರೆಟ್ – 120
* ಬೀಟ್ರೂಟ್ – 70
* ಈರೆಕಾಯಿ – 61
* ಬೆಳ್ಳುಳ್ಳಿ – 547
* ಕೊತ್ತಂಬರಿ – 152
* ಹಾಗಲಕಾಯಿ – 42
* ಸೊರೆಕಾಯಿ – 62
* ಬೆಂಡಕಾಯಿ – 74
* ನೆಲಗಡಲೆ – 148
* ಈರುಳ್ಳಿ – 92
* ಆಲೂಗಡ್ಡೆ — 65
* ಅವರೆಕಾಳು – 140
* ಟಿಂಡಾ – 120
* ಹೂಕೋಸು – 40
* ತೆಂಗಿನಕಾಯಿ – 50