Karwar / Hyderabad News
1938ರಲ್ಲಿ ಅಂಕೋಲಾದ ಹೊನ್ನಾಳಿ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ತುಳಸಿ ಗೌಡ ಅವರಿಗೆ ಯಾವುದೇ ಔಪಚಾರಿಕ ಶಿಕ್ಷಣ ಸಿಗಲಿಲ್ಲ. ಚಿಕ್ಕವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಅವರು, ತಾಯಿಗೆ ಆಸರೆಯಾಗಿ ಅಗಸೂರು ಗ್ರಾಮದ ನರ್ಸರಿಯಲ್ಲಿ ಕೆಲಸಕ್ಕೆ ಕೈಜೋಡಿಸಿದರು. ವಯಸ್ಕರಾದಾಗ ಕರ್ನಾಟಕ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಹಲವು ವರ್ಷಗಳ ಕಾಲ ದಿನಗೂಲಿಗೆ ಕಾರ್ಯ ನಿರ್ವಹಿಸಿದರು. ಅಲ್ಲಿ ಕೊಯ್ಲಿಗೆ ಬೀಜಗಳನ್ನು ರಕ್ಷಿಸುವುದರ ಜೊತೆಗೆ ಅವುಗಳನ್ನು ಮರಗಳಾಗಿ ಬೆಳೆಸುವುದು ಇವರ ಜವಾಬ್ದಾರಿಯಾಗಿತ್ತು. ಗಿಡ-ಮರ ನೆಟ್ಟು ಪರಿಸರ ಉಳಿಸುವಲ್ಲಿ ನಿರಂತರವಾಗಿ ಅವಿರತವಾಗಿ ಪ್ರಯತ್ನ ನಡೆಸಿ ವೃಕ್ಷ ಮಾತೆ ಎಂದು ಹೆಸರಾದ ತುಳಸಿ ಗೌಡ ವಯೋಸಹಜ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಅವರ ಸಾವಿಗೆ ಪ್ರಧಾನಿ ಮೋದಿ, ರಾಜ್ಯದ ರಾಜಕೀಯ ನಾಯಕರು ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.ಗಿಡಗಳ ಸಂರಕ್ಷಣೆಯಲ್ಲಿ ಅವರಿಗಿದ್ದ ಜ್ಞಾನದ ಹಿನ್ನೆಲೆ 35ನೇ ವರ್ಷಕ್ಕೆ ಅವರು ತಮ್ಮ ಕೆಲಸವನ್ನು ಖಾಯಂ ಮಾಡಿಕೊಂಡರು. ತಮ್ಮ ನಿವೃತ್ತಿ ವಯಸ್ಸಿನವರೆಗೂ ಅವರು ನರ್ಸರಿಯಲ್ಲಿ ಕೆಲಸ ನಿರ್ವಹಿಸಿ, ಗಿಡಗಳನ್ನು ಬೆಳೆಸುವ ಕಾರ್ಯದಲ್ಲಿ ನಿರತರಾದರು.
The tree mother who raised 40 thousand plants
ಕಾಡಿನಲ್ಲಿ ಬರೀಗಾಲಿನಲ್ಲಿ ನಡೆಯುತ್ತಿದ್ದ ಅವರು, 40,000 ಮರಗಳನ್ನು ತಮ್ಮ ಸ್ವಇಚ್ಛೆಯಿಂದ ನೆಟ್ಟು ಅವುಗಳನ್ನು ಪೋಷಿಸಿದರು. ಈ ಗಿಡಗಳು ಪರಿಸರ ಕಾಪಾಡುವಲ್ಲಿ ಪ್ರಮುಖವಾಗಿದ್ದು, ಇವುಗಳನ್ನು ಬೆಳೆಯುವುದ ಸುಲಭವಲ್ಲ. ಆದರೂ ಕೂಡ ಈ ಗಿಡಗಳನ್ನು ನಿರ್ವಹಣೆ ಮಾಡುವಲ್ಲಿ ಇವರ ಶ್ರಮ ಹೆಚ್ಚು. ಇವರು ಇಲ್ಲಿಯವರೆಗೆ ಒಂದು ಲಕ್ಷ ಸಸಿ ನೆಟ್ಟಿದ್ದು, 300 ಔಷಧೀಯ ಗಿಡ ನೆಟ್ಟಿದ್ದಾರೆ. 5ಕ್ಕೂ ಹೆಚ್ಚು ವನ್ಯಜೀವಿ ಸಂರಕ್ಷಣ ಉದ್ಯಾನವನದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ನರ್ಸರಿಯಲ್ಲಿದ್ದಾಗ ಅವರು ಭೂಮಿಯ ಸಾಂಪ್ರದಾಯಿಕ ಜ್ಞಾನವನ್ನು ಬಳಸಿಕೊಂಡು ಅರಣ್ಯ ಇಲಾಖೆಯ ಜೊತೆಗೂಡಿ ಅರಣ್ಯೀಕರಣದ ಪ್ರಯತ್ನಗಳಿಗೆ ಜೊತೆಯಾದರು. ಈ ವೇಳೆ ಸಸಿ ನೆಡುವುದು, ಕಳ್ಳ ಬೇಟೆ ತಡೆ ಮತ್ತು ಕಾಡ್ಗಿಚ್ಚಿನಿಂದ ವನ್ಯಜೀವಿ ರಕ್ಷಣೆಯಂತಹ ಕಾರ್ಯದಲ್ಲಿ ತೊಡಗಿದರು.ಅರಣ್ಯನಾಶ ಮತ್ತು ಪ್ರಾಣಿಗಳ ಆವಾಸಸ್ಥಾನದ ನಾಶದ ಪರಿಣಾಮ ಅರಿತು ಅರಣ್ಯೀಕರಣಕ್ಕೆ ಒತ್ತು ನೀಡಿದರು. ಅಷ್ಟೇ ಅಲ್ಲದೇ ಅರಣ್ಯ ಮತ್ತು ಅದರ ಸಂಪನ್ಮೂಲ ಸಂರಕ್ಷಿಸುವ ಕುರಿತು ಸ್ಥಳೀಯ ಸಮುದಾಯಗಳಿಗೆ ಅರಿವು ಮೂಡಿಸಲು ಪ್ರಾರಂಭಿಸಿದರು. ಇದಕ್ಕಾಗಿ ಗಿಡ ನೆಡುವ ಅಭಿಯಾನ, ವನ್ಯಜೀವಿ ಕಾರಿಡಾರ್ ಕಾರ್ಯಕ್ರಮಕ್ಕಾಗಿ ಸರ್ಕಾರ ಮತ್ತು ಎನ್ಜಿಒಗಳೊಂದಿಗೆ ಕಾರ್ಯ ನಿರ್ವಹಿಸಿದರು.2021ರಲ್ಲಿ ಪದ್ಮ ಪ್ರಶಸ್ತಿ ಪಡೆದ ಕರ್ನಾಟಕದ ಬುಡಕಟ್ಟು ಮಹಿಳೆ ಇವರಾಗಿದ್ದಾರೆ. ಸುತ್ತಲೂ ಕಾಡುಗಳಿಂದ ಕೂಡಿದ ಗ್ರಾಮದಲ್ಲಿ ಜನಿಸಿ, ಬೆಳೆದ ತುಳಸಿ ಗೌಡ, ಗಿಡ ಮತ್ತು ವನ್ಯಜೀವಿ ನಡುವೆ ಒಂದು ರೀತಿಯ ಅವಿನಾಭಾವ ಸಂಬಂಧದ ಸೆಳೆತವನ್ನು ಹೊಂದಿದ್ದರು. ಮರಗಳನ್ನು ಬೆಳೆಸುವುದು ಪರಿಸರ ಸಮತೋಲನ ಕಾಪಾಡುವಲ್ಲಿ ಅಪಾರ ಜ್ಞಾನ ಹೊಂದಿರುವ ಅವರು ತಮ್ಮ ಹಳ್ಳಿಗರಿಗೆ ಪ್ರೀತಿಯ ಅಜ್ಜಿಯಾಗಿದ್ದರು.ತುಳಸಿಗೌಡ ಅವರು ಪರಿಸರದ ಎನ್ಸೈಕ್ಲೋಪಿಡಿಯಾ ಎಂದೇ ಹೆಸರಾಗಿದ್ದಾರೆ. ಅಲ್ಲದೇ, ಕಾಡಿನಲ್ಲಿರುವ ಎಲ್ಲಾ ಜಾತಿಯ ಮರಗಳನ್ನು ಗುರುತಿಸುವ ಜ್ಞಾನವನ್ನು ಹೊಂದಿದ್ದು, ಇದೇ ಕಾರಣಕ್ಕೆ ತಮ್ಮ ಬುಡಕಟ್ಟು ಜನರಿಂದ ವೃಕ್ಷದೇವತೆ- ವನದೇವತೆ ಎಂದೇ ಗುರುತಿಸಿಕೊಂಡಿದ್ದಾರೆ.
Natural Work:
ತುಳಸಿ ಗೌಡ ಅರಣ್ಯದಲ್ಲಿ ತಾಯಿ ಮರವನ್ನು ಪತ್ತೆ ಮಾಡುವ ಜ್ಞಾನವನ್ನು ಹೊಂದಿದ್ದಾರೆ. ಅದರ ವಯಸ್ಸು ಮತ್ತು ಅರಣ್ಯದೊಂದಿಗೆ ಅವರು ಸಂಪರ್ಕವೂ ಇದರಲ್ಲಿ ಬಹುಮುಖ್ಯವಾಗಿದೆ. ಅರಣ್ಯೀಕರಣದಲ್ಲಿ ತಾಯಿ ಮರ ಪ್ರಮುಖವಾಗಿದೆ. ಸಸಿಗಳ ಮೊಳಕೆ ಸಂದರ್ಭದಲ್ಲಿ ತಾಯಿ ಬೇರುಗಳ ಸಂಪರ್ಕ ಅಗತ್ಯವಾಗುತ್ತದೆ. ಕಾರಣ, ಈ ಮರಗಳು ಸಾರಜನಕ ಮತ್ತು ಪೋಷಕಾಂಶಗಳನ್ನು ವಿನಿಮಯ ಮಾಡಿಕೊಳ್ಳುತ್ತವೆ.ಇವರು ಬೀಜ ಸಂಗ್ರಹದಲ್ಲಿ ಅತ್ಯುತ್ತಮ ಜ್ಞಾನವನ್ನು ಹೊಂದಿದ್ದಾರೆ. ಬೀಜವನ್ನು ಯಾವಾಗ ನೆಡಬೇಕು, ಯಾವಾಗ ಅದು ಮೊಳಕೆಯಾಗಿ, ಬೆಳೆಯುತ್ತದೆ ಎಂಬ ಸಂಪೂರ್ಣ ಜ್ಞಾನವನ್ನು ಹೊಂದಿದ್ದು, ಈ ಬೀಜಗಳನ್ನು ಇವರು ತಾಯಿ ಮರದಿಂದ ಸಂಗ್ರಹಿಸಿ, ಅದರ ಉಳಿಯುವಿಕೆಯ ಸಂರಕ್ಷಣೆ ಮಾಡಿದ್ದರು.
Awards:
ಕರ್ನಾಟಕದ ಪಶ್ಚಿಮ ಘಟ್ಟ ಮಾಸ್ತಿಕಟ್ಟೆ ವಲಯದಲ್ಲಿ ಪರಿಸರ ಸಂರಕ್ಷಣೆಯಲ್ಲಿ ಇವರ ಕೊಡುಗೆ ಅಪಾರವಾಗಿದೆ. ಇವರ ಈ ಕೊಡುಗೆ ಹಿನ್ನೆಲೆ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿಯನ್ನು 1999ರಲ್ಲಿ ನೀಡಲಾಗಿದ್ದು, ಭಾರತ ಸರ್ಕಾರದಿಂದ 2021ರಲ್ಲಿ ಪದ್ಮಶ್ರೀ ಪ್ರಶಸ್ತಿ ಒಲಿದಿದೆ.