ಹುಬ್ಬಳ್ಳಿ: ನಗರದ ಮೂರುಸಾವಿರ ಮಠದ ಮೂಜಗಂ ಸಭಾಭವನದಲ್ಲಿ ಶನಿವಾರ, ಭಾನುವಾರ ನಡೆಯುವ ಸೊಪ್ಪು ಮೇಳದ ಪ್ರದರ್ಶನ ಹಮ್ಮಿಕೊಂಡಿದ್ದಾರೆ.
ಧಾರವಾಡ, ಹಾವೇರಿ, ಬೆಳಗಾವಿ, ಮೈಸೂರು, ತುಮಕೂರು ಭಾಗಗಳ ರೈತರು ಸೊಪ್ಪು ಮತ್ತು ಸೊಪ್ಪಿನ ಮೌಲ್ಯವರ್ಧಿತ ಪದಾರ್ಥಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ತಂದಿರುತ್ತಾರೆ.
ಸಹಜ ಸಮೃದ್ಧ-ಸಾವಯವ ಕೃಷಿಕರ ಬಳಗದಿಂದ ಪ್ರಥಮ ಬಾರಿಗೆ ಸೊಪ್ಪು ಮೇಳ ಆಯೋಜಿಸಿರುವ ಪ್ರದರ್ಶನದಲ್ಲಿ ಸೊಪ್ಪುಗಳ ಮಹತ್ವವನ್ನು ಜನಪ್ರಿಯಗೊಳಿಸಲು ತೊಪ್ಪಲು ಪಲ್ಲೆಗಳ ಲೋಕದ ವೈಭವ ಅನಾವರಣಗೊಳಿಸಿದ್ದಾರೆ.
ನೆಲನೆಲ್ಲಿ, ಬಿಳಿ ಮತ್ತು ಕೆಂಪು ನೆಲನೆಲ್ಲಿ, ಸಂದು ಬಳ್ಳಿ, ವಾತಂಗಿ, ಹುಳಿ ಮಜ್ಜಿಗೆ ಸೊಪ್ಪು, ಅತ್ತಿಕುಡಿ, ಪತ್ರೆಕುಡಿ, ಕನ್ನೇಕುಡಿ, ಅಸಿಡಿಟಿ ಎಲೆ, ಚಕ್ರಮುನಿ, ರಾಸ್ನಾ, ರಕ್ತಶುದ್ಧಿ ಗಿಡ, ಪಾನ್ ಮಸಾಲಾ ಗಿಡ, ಕೆಂಪು, ಬಿಳೆ ಪುಂಡಿ, ದಕ್ಷಿಣ ಆಫ್ರಿಕನ್ ಪುಂಡಿ, ಬಿಲ್ವಪತ್ರಿ, ಮಂಚಿಕುಂಡಿ, ದಾಲ್ಚಿನ್ನಿ ಎಲೆ, ಲವಂಗ ಎಲೆ, ಸಕಲ ಸಂಬಾರ ಎಲೆ, ಬಿಳಿ ಮುರುಗಲು, ಕರ್ಪೂರ ತುಳಸಿ, ಕಪ್ಪು ಅರಿಶಿಣ, ಶ್ರೀಗಂಧ, ಮರ ಗೆಣಸು, ಚಕ್ರಮುನಿ, ನೋಣದ ಸೊಪ್ಪು, ಕಾಡು ತುಳಸಿ, ಚದುರಂಗ, ಗಣಿಕೆ ಇತ್ಯಾದಿ ಸೊಪ್ಪುಗಳ ಜಾತ್ರೆ ನೆರೆದಿತ್ತು.
ಧಾರವಾಡ, ಹಾವೇರಿ, ಬೆಳಗಾವಿ, ಮೈಸೂರು, ತುಮಕೂರು ಭಾಗಗಳ ರೈತರು ಸೊಪ್ಪು ಮತ್ತು ಸೊಪ್ಪಿನ ಮೌಲ್ಯವರ್ಧಿತ ಪದಾರ್ಥಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ತಂದಿದ್ದಾರೆ.
ಸೊಪ್ಪಿನ ಕೃಷಿ ಮಾಡುವ ಬಗೆ, ಲೆಟ್ಯುಸ್, ಕಾಲೆಯಂತಹ ವಿದೇಶಿ ಸೊಪ್ಪಿನ ತಳಿಗಳನ್ನು ಬೆಳೆಸುವ ಬಗೆ, ದೇಸಿ ಸೊಪ್ಪಿನ ತಳಿಗಳ ವಿಷಮುಕ್ತಗೊಳಿಸುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
ಬೆಂಗಳೂರು ನಗರಕ್ಕೆ ಸಾವಯವ ಸೊಪ್ಪು ಮತ್ತು ತರಕಾರಿ ಪೂರೈಸಿ, ವಾರ್ಷಿಕ 17 ಕೋಟಿ ರೂ. ವಹಿವಾಟು ನಡೆಸುತ್ತಿರುವ ಸಹಜ ಆರ್ಗಾನಿಕ್ಸ್ನ ಆನಂದತೀರ್ಥ ಪ್ಯಾಟಿ ಹಂಚಿಕೊಂಡಿದ್ದಾರೆ.
ಪಶ್ಚಿಮ ಬಂಗಾಳ ಮತ್ತು ಓರಿಸ್ಸಾದ ಬಹುವರ್ಣದ ಸೊಪ್ಪಿನ ಬೀಜ, ಚಳಿಗಾಲದ ತರಕಾರಿ ಬೀಜಗಳೂ ಇವೆ.
ರೈತರು ಹಾಗೂ ಕೃಷಿಕರು ನಮ್ಮ ಪುರಾತನ ಸೊಪ್ಪುಗಳ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಪ್ರಸಾದ ರಾಮ ಹೆಗಡೆ, ಶಿರಸಿ (ಸೊಪ್ಪು ಸಂರಕ್ಷಕರು) ಹೇಳಿದ್ದಾರೆ.
ಇದೇ ಪ್ರಥಮ ಬಾರಿ ಹುಬ್ಬಳ್ಳಿಯಲ್ಲಿ ಸೊಪ್ಪು ಮೇಳ ಆಯೋಜಿಸಲಾಗಿದ್ದು, ರೈತರು ಹಾಗೂ ಕೃಷಿಕರಿಂದ ಬಹಳಷ್ಟು ಸ್ಪಂದನೆ ದೊರೆಯುತ್ತಿದೆ.
ಬಗೆಬಗೆಯ ಸೊಪ್ಪುಗಳು ಹಾಗೂ ಅವನ್ನು ಬೆಳೆಯುವ ವಿಧಾನದ ಬಗ್ಗೆ ಮೇಳದಲ್ಲಿತರಬೇತಿ ನೀಡಲಾಗುತ್ತಿದೆ. ಆಸಕ್ತರು ಮೇಳಕ್ಕೆ ಆಗಮಿಸಿ, ಮಾಹಿತಿ ಪಡೆದುಕೊಳ್ಳಬಹುದು ಎಂದು ಶಾಂತಕುಮಾರ, ಮೇಳದ ಸಂಘಟಕರು ಹೇಳಿದ್ದಾರೆ.