Bangalore News:
2018 ರಲ್ಲಿ ಕಾರ್ಯಾಚರಣೆ ಸ್ಥಗಿತವಾಗಿದ್ದ ರೈಲಿಗೆ ಮತ್ತೆ ಯಶವಂತಪುರ ನಿಲ್ದಾಣದಲ್ಲಿ ರಾಜ್ಯದ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.ಕರ್ನಾಟಕದ ಪ್ರತಿಷ್ಠಿತ ಐಕಾನಿಕ್ ಐಷಾರಾಮಿ ಪ್ರವಾಸಿ ರೈಲಾದ ಗೋಲ್ಡನ್ ಚಾರಿಯೇಟ್ ಇಂದಿನಿಂದ ಪುನಾರಂಭವಾಗಿದೆ.
ಈ ರೈಲು ಮತ್ತೆ ಪರಂಪರ, ಐಷಾರಾಮಿ ಮತ್ತು ಸಾಟಿಯಿಲ್ಲದ ಪ್ರಯಾಣದ ಅನುಭವಗಳನ್ನು ಪ್ರಯಾಣಿಕರಿಗೆ ನೀಡಲಿದೆ. ಕರ್ನಾಟಕ ಮತ್ತು ದಕ್ಷಿಣ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ರಮಣೀಯ ಸೌಂದರ್ಯವನ್ನು ಇದು ಪ್ರತಿನಿಧಿಸಲಿದೆ. ಗೋಲ್ಡನ್ ಚಾರಿಯೇಟ್ ರೈಲು ಜಾಗತಿಕವಾಗಿ ಅತ್ಯುತ್ತಮ ಐಷಾರಾಮಿ ರೈಲು ಪ್ರಯಾಣಗಳಲ್ಲಿ ಒಂದಾಗಿ ಅಂತಾರಾಷ್ಟ್ರೀಯ ಮೆಚ್ಚುಗೆಯನ್ನು ಪುನಃ ಗಳಿಸಲಿದೆ.
ಕರ್ನಾಟಕ ಮತ್ತು ಭಾರತದ ವಿಶಾಲವಾದ ದಕ್ಷಿಣ ಪ್ರದೇಶದಲ್ಲಿನ ಪ್ರವಾಸೋದ್ಯಮವನ್ನು ಉತ್ತೇಜಿಸುವ ಐಷಾರಾಮಿ ರೈಲನ್ನು ಅಭಿವೃದ್ಧಿಪಡಿಸಲು 2002 ರಲ್ಲಿ ರೈಲ್ವೆ ಸಚಿವಾಲಯದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಮೊದಲು ಗೋಲ್ಡನ್ ಚಾರಿಯೇಟ್ ರೈಲಿನ ಪರಿಕಲ್ಪನೆಯನ್ನು 2002 ರಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಭಾರತೀಯ ರೈಲ್ವೇಯ ಸಹಯೋಗದಲ್ಲಿ ರೂಪಿಸಿತ್ತು.
2008 ರಿಂದ ಕಾರ್ಯಾರಂಭ ಮಾಡಿದ ರೈಲನ್ನು ಹಲವಾರು ತಾಂತ್ರಿಕ ಮತ್ತು ಖರ್ಚು ವೆಚ್ಚಗಳ ಕಾರಣಕ್ಕೆ 6 ವರ್ಷಗಳ ಹಿಂದೆ ಸ್ಥಗಿತಗೊಳಿಸಲಾಗಿತ್ತು.ರಾಜಸ್ಥಾನದ ಪ್ಯಾಲೇಸ್ ಆನ್ ವ್ಹೀಲ್ಸ್ ಐಷಾರಾಮಿ ರೈಲು ಯೋಜನೆಗಳ ಯಶಸ್ಸಿನಿಂದ ಸ್ಫೂರ್ತಿ ಪಡೆದ ಗೋಲ್ಡನ್ ಚಾರಿಯೇಟ್ ಅನ್ನು ಕರ್ನಾಟಕದ ವಾಸ್ತುಶಿಲ್ಪದ ಅದ್ಭುತಗಳು, ಶ್ರೀಮಂತ ಇತಿಹಾಸ ಮತ್ತು ನೈಸರ್ಗಿಕ ಸೌಂದರ್ಯವನ್ನು ಪ್ರದರ್ಶಿಸುವ ಐಷಾರಾಮಿ ರೈಲಿನಂತೆ ರೂಪಿಸಲಾಯಿತು.
ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯ ಮೂಲಕ ವಿನ್ಯಾಸಗೊಂಡಿರುವ ಗೋಲ್ಡನ್ ಚಾರಿಯೇಟ್ನ ಒಳಾಂಗಣವು ಸಾಂಪ್ರದಾಯಿಕ ದಕ್ಷಿಣ ಭಾರತೀಯ ಸೌಂದರ್ಯವನ್ನು ಪ್ರತಿಬಿಂಬಿಸುತ್ತಿದೆ.ರೈಲಿನ ಮಾಲೀಕತ್ವ ಶೇಕಡಾ 50 ರಷ್ಟು ಭಾರತೀಯ ರೈಲ್ವೆ ಇಲಾಖೆಯದ್ದಾಗಿದೆ. ತಲಾ ಶೇಕಡಾ 25 ರಷ್ಟು ಪಾಲು ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯದ್ದಾಗಿದೆ.
ಸುಮಾರು 900 ಲೇಔಟ್ಗಳನ್ನು ತಯಾರಿಸಿ ಈ ರೈಲಿಗೆ ಅಂತಿಮ ರೂಪುರೇಷೆಯನ್ನು ನೀಡಲಾಗಿದೆ. ವಾಸ್ತುಶಿಲ್ಪಿ ಕುಸುಮ್ ಫ್ರೆಂಡ್ಸ್ ಅವರ 200 ನುರಿತ ಬಡಗಿಗಳ ತಂಡದೊಂದಿಗೆ ಸಾಂಪ್ರದಾಯಿಕ ಸೌಂದರ್ಯ ಮತ್ತು ಆಧುನಿಕತೆಯನ್ನು ತರಲು ನಾಲ್ಕು ತಿಂಗಳ ಕಾಲ ಶ್ರಮವಹಿಸಲಾಗಿದೆ.
ನಮ್ಮ ರಾಜ್ಯದ ಮತ್ತು ದಕ್ಷಿಣ ಭಾರತ ರಾಜ್ಯಗಳ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಈ ರೈಲಿನಿಂದ ಸಾಧ್ಯವಾಗಲಿದೆ. 2018 ರಲ್ಲಿ ಖರ್ಚು ವೆಚ್ಚದ ಕಾರಣ ರೈಲನ್ನು ನಿಲ್ಲಿಸಲಾಗಿತ್ತು. ಮತ್ತೆ ಪ್ರಯಾಣಿಕರ ಒತ್ತಾಯದ ಮೇರೆಗೆ ರೈಲಿಗೆ ಚಾಲನೆ ನೀಡಲಾಗಿದೆ. ಮೈಸೂರು, ನಂಜನಗೂಡು, ಹಂಪಿ, ಕೇರಳ, ತಮಿಳುನಾಡು, ಗೋವಾ ಸೇರಿದಂತೆ ಹಲವು ಪ್ರವಾಸಿ ತಾಣಗಳನ್ನು ತಲುಪಲಿದೆ.
ಕೇಂದ್ರ ಸರ್ಕಾರದಿಂದ ಸಹಕಾರ ಕೂಡ ಸಿಕ್ಕಿರುವುದು ಸಂತಸ ತಂದಿದೆ. ದೇಶಕ್ಕೆ ಮತ್ತು ಪ್ರವಾಸಿಗರಿಗೆ ಹೆಮ್ಮೆಯ ಸಮರ್ಪಣೆ ಈ ರೈಲಾಗಿದೆ. ಐ.ಆರ್.ಸಿ.ಟಿ.ಸಿ ಯ ಸಹಕಾರಕ್ಕೆ ಸಹ ಅಭಿನಂದನೆ ಮತ್ತು ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಪ್ರವಾಸೋದ್ಯಮ ಸಚಿವ ಹೆಚ್. ಕೆ. ಪಾಟೀಲ್ ಮಾತನಾಡಿ, ಹೆಮ್ಮೆಯ ಗೋಲ್ಡನ್ ಚಾರಿಯೇಟ್ ರೈಲಿಗೆ ಮತ್ತೆ ಚಾಲನೆ ನೀಡಲಾಗಿದೆ. ನಮ್ಮ ರಾಜ್ಯದ ಮತ್ತು ದಕ್ಷಿಣ ಭಾರತ ರಾಜ್ಯಗಳ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಈ ರೈಲಿನಿಂದ ಸಾಧ್ಯವಾಗಲಿದೆ.