ನವದೆಹಲಿ: ವಿವಾಹಿತ ಮಹಿಳೆಯರು ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ವಿವಾಹಿತ ಮಹಿಳೆಯರು ತಮ್ಮ ಸ್ವಾರ್ಥ ಸಾಧನೆಗಾಗಿ ತಮ್ಮ ಗಂಡಂದಿರು ಮತ್ತು ಅತ್ತೆ ಮಾವಂದಿರಿಗೆ ಕಿರುಕುಳ ನೀಡಲು ಕ್ರೌರ್ಯ ತಡೆಗಟ್ಟುವ ಕಾನೂನನ್ನು ವ್ಯಾಪಕವಾಗಿ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಕಳವಳ ವ್ಯಕ್ತಪಡಿಸಿದೆ.
ಪತಿ ಮತ್ತು ಪತ್ನಿಯ ಅತ್ತೆ ಮಾವಂದಿರ ವಿರುದ್ಧ ಸೆಕ್ಷನ್ 498-ಎ (ಕ್ರೌರ್ಯ) ಅಡಿಯಲ್ಲಿ ದಾಖಲಾಗಿದ್ದ ಪ್ರಕರಣವೊಂದನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಇಂದು (ಡಿಸೆಂಬರ್ 10), ವೈವಾಹಿಕ ಭಿನ್ನಾಭಿಪ್ರಾಯದಿಂದ ಕೌಟುಂಬಿಕ ವಿವಾದಗಳು ಉದ್ಭವಿಸಿದಾಗ ಗಂಡನ ಕುಟುಂಬದ ಎಲ್ಲಾ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸುವ ಪ್ರವೃತ್ತಿಯ ಬಗ್ಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.
ತನ್ನ ಮಾಜಿ ಪತ್ನಿ ತನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಹಣ ಸುಲಿಗೆ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ (34) ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಮಧ್ಯೆ ಸುಪ್ರೀಂ ಕೋರ್ಟ್ನ ಈ ಉಲ್ಲೇಖ ಮಹತ್ವ ಪಡೆದುಕೊಂಡಿದೆ.
ಅತ್ತೆ-ಮಾವಂದಿರ ಕ್ರೌರ್ಯದಿಂದ ಮಹಿಳೆಯರನ್ನು ರಕ್ಷಿಸುವ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಮುಗ್ಧ ಜನರಿಗೆ ಅನಗತ್ಯ ಕಿರುಕುಳವನ್ನು ತಡೆಗಟ್ಟಲು ವರದಕ್ಷಿಣೆ ಕಿರುಕುಳ ಪ್ರಕರಣಗಳನ್ನು ನಿರ್ಧರಿಸುವಾಗ ನ್ಯಾಯಾಲಯಗಳು ಎಚ್ಚರಿಕೆಯಿಂದ ತೀರ್ಮಾನಿಸಬೇಕು ಎಂದು ಸೂಚಿಸಿದೆ.
ಆತ್ಮಹತ್ಯೆಗೂ ಮುನ್ನ ಅತುಲ್ ಸುಭಾಷ್ 80 ನಿಮಿಷಗಳ ವೀಡಿಯೊವನ್ನು ರೆಕಾರ್ಡ್ ಮಾಡಿದ್ದು, ಅದರಲ್ಲಿ ತನ್ನ ವಿಚ್ಛೇದಿತ ಪತ್ನಿ ನಿಕಿತಾ ಸಿಂಘಾನಿಯಾ ಮತ್ತು ಅವರ ಕುಟುಂಬವು ತನ್ನ ಮತ್ತು ತನ್ನ ಕುಟುಂಬದಿಂದ ಹಣ ಸುಲಿಗೆ ಮಾಡಲು ಅನೇಕ ಪ್ರಕರಣಗಳನ್ನು ದಾಖಲಿಸಿದೆ ಎಂದು ಆರೋಪಿಸಿದ್ದರು. ಇದಲ್ಲದೆ, ಅತುಲ್ ತನ್ನ 24 ಪುಟಗಳ ಆತ್ಮಹತ್ಯೆ ಟಿಪ್ಪಣಿಯಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನು ಟೀಕಿಸಿದ್ದಾರೆ.
ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಎನ್.ಕೋಟಿಶ್ವರ್ ಸಿಂಗ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು, ಮೂಲತಃ ಮಹಿಳೆಯರನ್ನು ಕೌಟುಂಬಿಕ ಹಿಂಸಾಚಾರ ಮತ್ತು ಕಿರುಕುಳದಿಂದ ರಕ್ಷಿಸುವ ಉದ್ದೇಶವನ್ನು ಹೊಂದಿದ್ದ ಈ ಕಾನೂನನ್ನು ಕೆಲ ಮಹಿಳೆಯರು ತಮ್ಮ ಪತಿ ಮತ್ತು ಅವರ ಕುಟುಂಬದ ವಿರುದ್ಧ ತಮ್ಮ “ಅಸಮಂಜಸ ಬೇಡಿಕೆಗಳನ್ನು” ಈಡೇರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ ಎಂದು ಗಮನಿಸಿತು.
ದಾರಾ ಲಕ್ಷ್ಮಿ ನಾರಾಯಣ ಮತ್ತು ಇತರರು ವಿರುದ್ಧ ತೆಲಂಗಾಣ ರಾಜ್ಯ ಮತ್ತು ಮತ್ತೊಬ್ಬರ ಪ್ರಕರಣದ ವಿಚಾರಣೆಯ ವೇಳೆ ವಿವಾಹಿತ ಮಹಿಳೆಯರು ಗಂಡಂದಿರು ಮತ್ತು ಅವರ ಸಂಬಂಧಿಕರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 498 ಎ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.