ಹೊಸದಿಲ್ಲಿ: 2025ರಲ್ಲಿ ದೇಶದ ಜನಸಂಖ್ಯೆಯನ್ನು ಲೆಕ್ಕ ಹಾಕುವ ಅಧಿಕೃತ ಸಮೀಕ್ಷೆಯು ಆರಂಭವಾಗಲಿದೆ ಕೋವಿಡ್ 19 ಕಾರಣದಿಂದ ವಿಳಂಬವಾಗಿದ್ದ ಸಾರ್ವತ್ರಿಕ ಜನಗಣತಿಯನ್ನು ಮುಂದಿನ ವರ್ಷ ನಡೆಸಲು ಕೇಂದ್ರ ಸರ್ಕಾರ ತಯಾರಿ ನಡೆಸಿದೆ ಎಂದು ತಿಳಿಸಿದೆ.
ಲೋಕಸಭೆಯಲ್ಲಿನ ಕ್ಷೇತ್ರಗಳ ಸೀಮಾನಿರ್ಣಯ ಕಾರ್ಯ ಅರಂಭವಾಗಲಿದೆ. ಈ ಪ್ರಕ್ರಿಯೆ 2028ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
2029ರ ಲೋಕಸಭೆ ಚುನಾವಣೆ ವೇಳೆ ವಿವಿಧ ರಾಜ್ಯಗಳಲ್ಲಿನ ಲೋಕಸಭೆ ಸೀಟುಗಳ ಸಂಖ್ಯೆಯಲ್ಲಿ ಬದಲಾವಣೆಯಾಗಲಿದ್ದು, ಒಟ್ಟು ಸಂಸತ್ ಸ್ಥಾನಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.
ಜನಗಣತಿ ಕುರಿತು ಕೇಂದ್ರ ಸರ್ಕಾರ ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ ಎನ್ನಲಾಗಿದೆ.
ಮುಂದಿನ ವರ್ಷ ನಡೆಯಲಿರುವ ಜನಗಣತಿಯು ಸಾಮಾನ್ಯ ವರ್ಗ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಒಳಗಿನ ಉಪ ಜಾತಿಗಳ ಸಮೀಕ್ಷೆಗಳನ್ನು ಸಹ ಒಳಗೊಳ್ಳಬಹುದು ಎಂದು ತಿಳಿಸಿದೆ.
ಜಾತಿ ಗಣತಿ ನಡೆಸಲು ಕೇಂದ್ರ ಸರ್ಕಾರ ನಿರಾಕರಿಸುತ್ತಿರುವುದು ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯಗಳಿಗೆ ಎಸಗುತ್ತಿರುವ ದ್ರೋಹ ಎಂದು ಕಾಂಗ್ರೆಸ್ ನಾಯಕ ಮಾಣಿಕ್ಕಂ ಟ್ಯಾಗೋರ್ ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು (ಎನ್ಪಿಆರ್) ಅಪ್ಡೇಟ್ ಮಾಡುವ ಈ ಪ್ರಕ್ರಿಯೆಯು 2021ರಲ್ಲಿ ನಿಗದಿಯಾಗಿತ್ತು. ಆದರೆ ಕೋವಿಡ್ ಸಾಂಕ್ರಾಮಿಕ ಕಾರಣದಿಂದ ಮುಂದೂಡಿಕೆಯಾಗಿತ್ತು. ನಂತರ ಗಣತಿ ನಡೆಸಲು ಕೇಂದ್ರ ಸರ್ಕಾರ ಮುಂದಾಗಿರಲಿಲ್ಲ. ಈ ಬದಲಾವಣೆಯಿಂದ ಇನ್ನು ಗಣತಿ ನಡೆಯುವ ನಿಗದಿತ ಸಮಯ ಕೂಡ ಬದಲಾಗುವ ಸಾಧ್ಯತೆ ಇದೆ.
2011ರಲ್ಲಿ ನಡೆದಿದ್ದ ಕೊನೆಯ ಜನಗಣತಿ ಪ್ರಕಾರ ದೇಶದಲ್ಲಿ 121 ಕೋಟಿ ಜನಸಂಖ್ಯೆ ಇರುವುದಾಗಿ ವರದಿಯಾಗಿತ್ತು. ಆಗ ಅದು ಶೇ 17.7ರಷ್ಟು ಬೆಳವಣಿಗೆ ತೋರಿಸಿತ್ತು. ಆದರೆ ಈಗ ಅದು 144 ಕೋಟಿಯನ್ನೂ ಮೀರಿ ಚೀನಾವನ್ನು ಹಿಂದಿಕ್ಕಿದೆ.