ಬೆಂಗಳೂರು: ರಾಜ್ಯದಲ್ಲಿ ಒಂದರಿಂದ ಹತ್ತನೇ ತರಗತಿ ಮಕ್ಕಳಿಗೆ ಮೊಟ್ಟೆ ವಿತರಣೆಯಲ್ಲಿ ವ್ಯಾಪಕ ಅಕ್ರಮ ನಡೆದಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಶಿಕ್ಷಣ ಇಲಾಖೆ ಮೊಟ್ಟೆ, ಬಾಳೆಹಣ್ಣು ಮತ್ತು ಚಿಕ್ಕಿ ವಿತರಣೆಯ ಮಾಹಿತಿಯನ್ನು ಪಿಎಂ ಪೋಷನ್ ವೆಬ್ಸೈಟ್ನಲ್ಲಿ ಪ್ರತೀದಿನ ಆನ್ಲೈನ್ ಮೂಲಕ ಸಲ್ಲಿಸುವಂತೆ ಮುಖ್ಯ ಶಿಕ್ಷಕರಿಗೆ ಶಾಲಾ ಶಿಕ್ಷಣ ಇಲಾಖೆ ಸೂಚಿಸಿದೆ.
ರಾಜ್ಯದಲ್ಲಿ ಅಜೀಂ ಪ್ರೇಮ್ ಜಿ ಪ್ರತಿಷ್ಠಾನ (ಎಪಿಎಫ್) ದ ನೆರವಿನೊಂದಿಗೆ ವಾರದ ಆರು ದಿನ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಮತ್ತು ಚಿಕ್ಕಿ ವಿತರಣೆಯ ಯೋಜನೆ ಜಾರಿಯಲ್ಲಿದೆ. ವಾರದ ಎರಡು ದಿನ ರಾಜ್ಯ ಸರಕಾರ ಮತ್ತು ಉಳಿದ ನಾಲ್ಕು ದಿನ ಮೊಟ್ಟೆ, ಬಾಳೆಹಣ್ಣು ವಿತರಣೆಯ ವೆಚ್ಚವನ್ನು ಎಪಿಎಫ್ ನಿರ್ವಹಿಸುತ್ತದೆ.
ಇತ್ತೀಚೆಗೆ 367 ಶಾಲೆಗಳಲ್ಲಿ ಎಪಿಎಫ್ ಯೋಜನೆಯ ಮೌಲ್ಯಮಾಪನ ನಡೆಸಿದಾಗ 66 ಶಾಲೆಗಳಲ್ಲಿ ಮೊಟ್ಟೆ ವಿತರಿಸದಿರುವುದು, ಮೊಟ್ಟೆ ತಿನ್ನದ ಮಕ್ಕಳಿಗೆ ಆದ್ಯತೆಯ ಮೇರೆಗೆ ಬಾಳೆಹಣ್ಣು ನೀಡದೆ ಚಿಕ್ಕಿ ನೀಡಿರುವುದು, ಹಾಗೆಯೇ ನಿಗದಿತ ತೂಕಕ್ಕಿಂತ ಕಡಿಮೆ ತೂಕದ ಚಿಕ್ಕಿ ನೀಡಿರುವುದು ಬಹಿರಂಗವಾಗಿತ್ತು. ಈ ಕರ್ತವ್ಯ ಲೋಪಕ್ಕಾಗಿ ಒಟ್ಟು 98 ಅಧಿಕಾರಿಗಳಿಗೆ ಶಾಲಾ ಶಿಕ್ಷಣ ಇಲಾಖೆ ನೋಟಿಸ್ ನೀಡಿತ್ತು.
ಬಿಸಿಯೂಟದ ಜೊತೆಗೆ ಮೊಟ್ಟೆ ಕೊಡೋದಕ್ಕೆ ಕೆಲವರ ಆಕ್ಷೇಪವಿದೆ. ನಾವು ಸಸ್ಯಾಹಾರಿಗಳು. ನಮ್ಮ ಮಕ್ಕಳಿಗೆ ಬಲವಂತವಾಗಿ ಮೊಟ್ಟೆ ಕೊಡಬೇಡಿ ಅನ್ನೋದು ಅವರ ನಿಲುವು. ಹೀಗಾಗಿಯೇ ಸರ್ಕಾರ ಮೊಟ್ಟೆ ಬದಲಿಗೆ ಚಿಕ್ಕಿ, ಬಾಳೆ ಹಣ್ಣು ಕೊಡೋದಕ್ಕೆ ಮುಂದಾಯ್ತು. ಇದಾದ ನಂತರ ಕೆಲವರು ಮೊಟ್ಟೆ ಏಕೆ ಮೊಳಕೆ ಕಾಳು ಕೊಡಿ ಅಂತಾನೂ ಆಯ್ಕೆ ಮುಂದಿಟ್ಟರು. ಈ ಮಧ್ಯೆ ಒಂದಷ್ಟು ಜನ ಬಿಸಿಯೂಟದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಸಬೇಡಿ ಅಂತಾನೂ ಆಗ್ರಹ ಮಾಡಿದ್ರು. ಇವೆಲ್ಲದರ ನಡುವೆ ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆ ಮೊಟ್ಟೆ ಕೊಡುವ ಯೋಜನೆ ರಾಜ್ಯಾದ್ಯಂತ ಜಾರಿ ಆಗಿದೆ. ಈ ಯೋಜನೆ ಉತ್ತರ ಕರ್ನಾಟಕ ಭಾಗದ ಮಕ್ಕಳ ಪೌಷ್ಠಿಕತೆ ಹೆಚ್ಚಿಸಿದೆ ಎಂಬ ವರದಿಯೂ ಸಿಕ್ಕಿದೆ. ಇದೀಗ ಮೊಟ್ಟೆ ವಿರೋಧಿ ಹೋರಾಟಗಾರರ ನಿಲುವೇನು ಅನ್ನೋದು ಕುತೂಹಲ ಕೆರಳಿಸಿದೆ.
ಆಹಾರ ಅನ್ನೋದು ಅವರವರ ಆಯ್ಕೆ.. ಮೊಟ್ಟೆ ಬೇಕು ಎಂದು ಕೇಳೋದು ಎಷ್ಟು ಸರಿಯೋ.. ಮೊಟ್ಟೆ ಬೇಡ ಅನ್ನೋರ ವಾದವೂ ಸರಿಯೇ.. ಹೀಗಾಗೇ ಸರ್ಕಾರ ಆಹಾರದ ಸ್ವಾತಂತ್ರ್ಯವನ್ನ ಗಮನದಲ್ಲೇ ಇಟ್ಟುಕೊಂಡು ಯೋಜನೆ ಮುಂದುವರೆಸಿದೆ. ಮಕ್ಕಳು ಬಿಸಿಯೂಟದಲ್ಲಿ ಮೊಟ್ಟೆಯನ್ನಾದರೂ ತಿನ್ನಲಿ, ಬಾಳೆ ಹಣ್ಣನ್ನಾದ್ರೂ ತಿನ್ನಲಿ.. ಆದ್ರೆ ಆರೋಗ್ಯವಂತರಾಗಿರಲಿ ಎಂದು ತಿಳಿಸಿದೆ.