ವಿಜಯಪುರ ಜಿಲ್ಲೆಯ 18 ವರ್ಷದ ಯುವತಿಯೊಬ್ಬಳು ದೇಶದ ಅತ್ಯಂತ ಕಿರಿಯ ಪೈಲಟ್ ಆಗಿ ಇತಿಹಾಸ ನಿರ್ಮಿಸಿದ್ದು, ರಾಜ್ಯದ ಹಿರಿಮೆಯನ್ನು ಹೆಚ್ಚಿಸಿದ್ದಾರೆ.
ಸಮೀರಾ ಅವರ ವಾಯುಯಾನ ಪ್ರಯಾಣವು ವಿನೋದ್ ಯಾದವ್ ಏವಿಯೇಷನ್ ಅಕಾಡೆಮಿಯಲ್ಲಿ ಆರು ತಿಂಗಳ ತರಬೇತಿ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು. ಅಕಾಡೆಮಿ ಸಂಸ್ಥಾಪಕರಾದ ವಿನೋದ್ ಯಾದವ್ ಮತ್ತು ಕ್ಯಾಪ್ಟನ್ ತಪೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ ಎಲ್ಲಾ ಸಿಪಿಎಲ್ ಪರೀಕ್ಷೆಗಳನ್ನು ಯಶಸ್ವಿಯಾಗಿ ಉತ್ತೀರ್ಣರಾದರು.
ತರಬೇತಿಯು ಕಠಿಣವಾಗಿತ್ತು. ಆದರೆ, ಬೋಧಕರ ನಿರಂತರ ಬೆಂಬಲ ಮತ್ತು ಮಾರ್ಗದರ್ಶನದಿಂದ ಅದು ಸುಲಭವಾಯಿತು. ನನ್ನ ಸಾಧನೆಯ ಎಲ್ಲಾ ಶ್ರೇಯಸ್ಸು ಕ್ಯಾಪ್ಟನ್ ತಪೇಶ್ ಕುಮಾರ್ ಮತ್ತು ವಿನೋದ್ ಯಾದವ್ ಅವರಿಗ ಸಲ್ಲುತ್ತದೆ ಎಂದು ಸಮೈರಾ ಹೇಳಿದ್ದಾರೆ.
ಲಿಖಿತ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ನಂತರ ಸಮೈರಾ ಅವರು, ಮಹಾರಾಷ್ಟ್ರದ ಬಾರಾಮತಿಯಲ್ಲಿರುವ ಕಾರ್ವರ್ ಏವಿಯೇಷನ್ ಅಕಾಡೆಮಿಯಲ್ಲಿ ವಿಮಾನ ತರಬೇತಿಗೆ ತೆರಳಿದ್ದರು. ಇಲ್ಲಿನ ತರಬೇಕಿ ಅವರ ಕೌಶಲ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು.
ಕಾರ್ವರ್ ಏವಿಯೇಷನ್ ಅಕಾಡೆಮಿ ನನ್ನ ತಾಂತ್ರಿಕ ಪರಿಣತಿಯನ್ನು ಬಲಪಡಿಸಿತು. ಜೊತೆಗೆ ವಾಯುಯಾನ ಕುರಿತು ಮತ್ತಷ್ಟು ತಿಳಿದುಕೊಂಡಿದ್ದೆ. ಕ್ಯಾಪ್ಟನ್ ತಪೇಶ್ ಅವರ ಕಥೆಯು ದೊಡ್ಡ ಕನಸು ಕಾಣಲು ನನಗೆ ಪ್ರೇರಣೆ ನೀಡಿತು. ಬಳಿಕ ಎಲ್ಲವನ್ನೂ ಸವಾಲಾಗಿ ಸ್ವೀಕರಿಸಿದೆ. ಯಾವುದೇ ವ್ಯಕ್ತಿಯ ಯಶಸ್ಸಿನಲ್ಲಿ ಕುಟುಂಬದ ಬೆಂಬಲ ಯಾವಾಗಲೂ ಪ್ರಮುಖ ಪಾತ್ರ ವಹಿಸುತ್ತದೆ, ಈ ಗುರಿಯನ್ನು ಸಾಧಿಸಲು ನನ್ನ ಪೋಷಕರು ಬೆನ್ನೆಲುಬಾಗಿ ನಿಂತು ಎಲ್ಲವನ್ನೂ ಮಾಡಿದ್ದಾರೆ. ದೃಢವಾದ ಇಚ್ಛೆ ಮತ್ತು ಕುಟುಂಬದ ಬೆಂಬಲವಿದ್ದರೆ, ಯಾವುದೇ ಹುಡುಗಿ ತಮ್ಮ ಜೀವನದಲ್ಲಿ ದೊಡ್ಡ ಗುರಿಯನ್ನು ಸಾಧಿಸಬಹುದು ಎಂದು ಸಮೈರಾ ತಿಳಿಸಿದ್ದಾರೆ.
ಉದ್ಯಮಿ ಅಮೀನ್ ಹುಲ್ಲೂರ್ ಅವರ ಪುತ್ರಿ, 18 ವರ್ಷದ ಸಮೈರಾ ಹುಲ್ಲೂರು ಅವರು ಕಮರ್ಶಿಯಲ್ ಪೈಲಟ್ ಲೈಸನ್ಸ್ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದು, ಈ ಮೂಲಕ ವಿಜಯಪುರ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಕೀರ್ತಿಯ ಪತಾಕೆಯನ್ನು ಹಾರಿಸಿದ್ದಾರೆ.