ಉಡುಪಿ: ಶ್ರೀಕೃಷ್ಣ ಮಠವೆಂದರೆ ಅನ್ನ ಬ್ರಹ್ಮನ ಆರಾಧನೆ ನಡೆಯುವ ಕ್ಷೇತ್ರ. ಇಲ್ಲಿ ಪ್ರತೀದಿನ ನಡೆಸುವ ಅನ್ನ ಸಂತರ್ಪಣೆಗೆ ವಿಶೇಷ ಮನ್ನಣೆ ಇದೆ. ಹಾಗಾಗಿ, ಮಠದಲ್ಲಿ ನಡೆಯುವ ಪ್ರತಿಯೊಂದು ಆಚರಣೆಯೂ ಅನ್ನದಾನ ಚಟುವಟಿಕೆಗೆ ಪೂರಕವಾಗಿರುತ್ತದೆ.
2026ರಲ್ಲಿ ನಡೆಯಲಿರುವ ಶಿರೂರು ಮಠದ ಪರ್ಯಾಯಕ್ಕೆ ಬಾಳೆ ಮುಹೂರ್ತ ನಡೆಸುವ ಮೂಲಕ ಇಂದು ಅನ್ನಬ್ರಹ್ಮನ ಸೇವೆಗೆ ಚಾಲನೆ ನೀಡಲಾಯಿತು.
ಉಡುಪಿ ಕೃಷ್ಣನ ಆರಾಧನೆಗೆ ಎಂಟು ಮಠಾಧೀಶರು ಕಳೆದ 8 ಶತಮಾನದ ಹಿಂದೆ ನಿಯೋಜಿತರಾಗಿದ್ದಾರೆ. ಅಷ್ಟಮಠಗಳ ಪರಂಪರೆಯಲ್ಲಿ ನಾನಾ ಯತಿಗಳು ಕೃಷ್ಣನ ಪೂಜೆ ಮಾಡುತ್ತಾ ಬಂದಿದ್ದಾರೆ. ಸದ್ಯ ಪುತ್ತಿಗೆ ಮಠದ ಪರ್ಯಾಯ ಮಹೋತ್ಸವ ನಡೆಯುತ್ತಿದ್ದು, 2026ರ ಜನವರಿ ತಿಂಗಳಲ್ಲಿ ಶಿರೂರು ಮಠ ಶ್ರೀಕೃಷ್ಣ ಪೂಜಾಧಿಕಾರವನ್ನು ಪಡೆಯುತ್ತದೆ.
“ಇವತ್ತು ನಮ್ಮ ಪ್ರಥಮ ಪರ್ಯಾಯದ ಪ್ರಥಮ ಮುಹೂರ್ತವಾಯಿತು. ಪರ್ಯಾಯಕ್ಕೆ ಅನೇಕ ಭಕ್ತರು ಬರುತ್ತಾರೆ. ಕೃಷ್ಣ ಭಕ್ತರ ಪ್ರಸಾದ ಸ್ವೀಕಾರಕ್ಕೆ ಎಲೆಗಳು ಬೇಕು. ಅದಕ್ಕೆ ಬಾಳೆಯನ್ನು ನೆಟ್ಟಿದ್ದು. ದೇವರಿಗೆ ನೈವೇದ್ಯ ಮಾಡಿದ ಮೇಲೆ ಭಕ್ತರು ಸ್ವೀಕಾರ ಮಾಡಿದಾಗ ಈ ಎಲೆ ಉಪಯೋಗ ಆಗುತ್ತೆ. ಹೀಗಾಗಿ ನೀವೆಲ್ಲಾ ಭಕ್ತರು ಪರ್ಯಾಯಕ್ಕೆ ಬರಲೇಬೇಕು” ಎಂದು ಮನವಿ ಮಾಡಿದರು.
ಶಿರೂರು ಪರ್ಯಾಯಕ್ಕೆ ಪೂರ್ವಭಾವಿಯಾಗಿ ನಡೆಯುವ ಮೊಟ್ಟಮೊದಲ ಬಾಳೆ ಮುಹೂರ್ತ ಇಂದು ನಡೆಯಿತು. ಅನ್ನದಾಸೋಹಕ್ಕೆ ಬೇಕಾದ ಪ್ರತಿಯೊಂದು ವಸ್ತುಗಳ ಜೋಡಣೆ ಮಾಡುವುದು ಈ ಪೂರ್ವಭಾವಿ ಮುಹೂರ್ತಗಳ ಉದ್ದೇಶ.
ಇಂದಿನ ಬಾಳೆ ಮುಹೂರ್ತದಲ್ಲಿ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರು ಉಪಸ್ಥಿತರಿದ್ದು, ಪರ್ಯಾಯದ ಯಶಸ್ವಿಗೆ ವಿಶೇಷ ಪ್ರಾರ್ಥನೆ ಮಾಡಿದರು. ಮಠದ ಭಕ್ತರ ಜೊತೆಗೂಡಿ ಮೆರವಣಿಗೆಯಲ್ಲಿ ತೆರಳಿ ಪೂರ್ಣಪ್ರಜ್ಞ ಕಾಲೇಜು ಆವರಣದ ಮಠದ ಜಾಗದಲ್ಲಿ ಬಾಳೆ ಗಿಡಗಳನ್ನು ನೆಟ್ಟರು. ಮುಂದಿನ ಒಂದು ವರ್ಷಗಳ ಕಾಲ ಇಲ್ಲಿನ ಬಾಳೆ ತೋಟದಲ್ಲಿ ಸಂಗ್ರಹವಾಗುವ ಎಲೆ ಹಾಗೂ ಫಲ ವಸ್ತುಗಳನ್ನು ಪರ್ಯಾಯ ಸಂದರ್ಭದಲ್ಲಿ ಅನ್ನದಾಸೋಹಕ್ಕೆ ಬಳಸುವುದು ಪ್ರತೀತಿ.
ಈ ಹಿಂದೆ ಮಠಾಧೀಶರಾಗಿದ್ದ ಶ್ರೀಲಕ್ಷ್ಮಿ ವರತೀರ್ಥರು, ಅನೇಕ ವಿವಾದಗಳ ನಡುವೆ ಅಸುನೀಗಿದ ನಂತರ, ಕೆಲಕಾಲ ಶಿರೂರು ಮಠಕ್ಕೆ ಯಾವುದೇ ವಾರಸುದಾರರು ಇರಲಿಲ್ಲ. ಆ ಬಳಿಕ ವೇದವರ್ಧನ ತೀರ್ಥರನ್ನು ಶಿರೂರು ಮಠದ ಮಠಾಧಿಪತಿಯಾಗಿ ನಿಯೋಜಿಸಲಾಗಿದೆ.
2026ರ ಜನವರಿ 18ರಂದು ವೇದವರ್ಧನ ತೀರ್ಥರ ಮೊದಲ ಶ್ರೀಕೃಷ್ಣ ಪರ್ಯಾಯ ನಡೆಯಲಿದೆ. ಅನ್ನ ವಿಠಲನ ಆರಾಧಕರಾಗಿರುವ ಶಿರೂರು ಮಠದ ಭಕ್ತರು, ಅನ್ನ ಬ್ರಹ್ಮನ ಆರಾಧನೆಗೆ ಸಿದ್ಧತೆಗಳನ್ನು ಪ್ರಾರಂಭಿಸಿದ್ದಾರೆ. ಇಂದು ಬಾಳೆ ಮುಹೂರ್ತಕ್ಕೂ ಮುನ್ನ, ಕೃಷ್ಣ, ಮುಖ್ಯಪ್ರಾಣ ದರ್ಶನ ಹಾಗೂ ಚಂದ್ರಮೌಳೇಶ್ವರ ಅನಂತೇಶ್ವರ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.