ವಿಜಯಪುರ : ಹವಾಮಾನ ವೈಪರೀತ್ಯದಿಂದಾಗಿ ನಷ್ಟ ಅನುಭವಿಸುತ್ತಿರುವ ದ್ರಾಕ್ಷಿ ಬೆಳೆಗಾರರಿಗೆ 2023-24 ನೇ ಸಾಲಿನ ಬೆಳೆ ವಿಮೆ ಹಣ ಪಾವತಿಯಾಗಿಲ್ಲ. ಮತ್ತೊಂದು ಫಸಲಿಗೆ ತೋಟ ಹದಗೊಳಿಸುತ್ತಿರುವ ರೈತರಿಗೆ ಕಳೆದ ವರ್ಷದ ಹಾನಿಯ ಬೆಳೆ ವಿಮೆಯೂ ಬಾರದೆ ಪ್ರಸಕ್ತ ಬೆಳೆಗೆ ಖರ್ಚು ಮಾಡಲು ಹಣವೂ ಇಲ್ಲದೆ ಸಂಕಷ್ಟ ಎದುರಾಗಿದೆ ಎಂದು ರೈತರು ತಿಳಿಸಿದ್ದಾರೆ.
ರಾಜ್ಯದ 47 ಸಾವಿರ ಹೆಕ್ಟೇರ್ ದ್ರಾಕ್ಷಿ ಬೆಳೆ ಕ್ಷೇತ್ರದಲ್ಲಿ 40 ಸಾವಿರ ಹೆಕ್ಟೇರ್ ಉತ್ತರ ಕರ್ನಾಟಕದಲ್ಲಿದೆ. ವಿಜಯಪುರ ಜಿಲ್ಲೆ, ನೆರೆಯ ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ ಇದೆ.
ರಾಜ್ಯದಲ್ಲೇ ಅತಿಹೆಚ್ಚು ದ್ರಾಕ್ಷಿ ಬೆಳೆಯುವ ವಿಜಯಪುರ ಜಿಲ್ಲೆಯಲ್ಲಿ 10 ಸಾವಿರಕ್ಕೂ ಹೆಚ್ಚು ರೈತರು 10 ಸಾವಿರ ಹೆಕ್ಟೇರ್ನಷ್ಟು ದ್ರಾಕ್ಷಿ ಬೆಳೆಗೆ 2023-24 ನೇ ಸಾಲಿನಲ್ಲಿ ಬೆಳೆ ವಿಮೆ ಮಾಡಿಸಿದ್ದಾರೆ.
ಹವಾಮಾನ ವೈಪರೀತ್ಯ, ಭೀಕರ ಬರದಿಂದಾಗಿ ದ್ರಾಕ್ಷಿ ಫಸಲು ಸರಿಯಾಗಿ ಬಾರದೆ ನಷ್ಟ ಉಂಟಾಯಿತು. ಪ್ರಸಕ್ತ ಸಾಲಿನ ದ್ರಾಕ್ಷಿ ಫಸಲು ಪಡೆಯಲು ಸದ್ಯ ಚಾಟ್ನಿ ಸಿದ್ಧತೆ ನಡೆದಿದೆ. ದುಬಾರಿ ಔಷಧ, ಕಾರ್ಮಿಕರಿಗೆ ಕೂಲಿ ಸೇರಿದಂತೆ ಲಕ್ಷಗಟ್ಟಲೆ ಹಣ ಖರ್ಚು ಮಾಡಬೇಕು.
2024-25 ನೇ ಸಾಲಿನ ಬೆಳೆಗೂ ಜೂನ್ ತಿಂಗಳಲ್ಲೇ ವಿಮೆ ಕಂತು ತುಂಬಿದ್ದಾರೆ. ಈಗ ಬೆಳೆಯ ಮುಂದಿನ ಹಂತಕ್ಕೆ ಖರ್ಚು ಮಾಡಲಾಗದೆ ರೈತರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ.
ದ್ರಾಕ್ಷಿ ಬೆಳೆಗಾರರು ವಿಮಾ ಕಂಪನಿ ಹಾಗೂ ತೋಟಗಾರಿಕೆ ಇಲಾಖೆಗೆ 5 ತಿಂಗಳಿಂದ ಅಲೆದಾಡುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗೆ ಒಂದೊಂದು ರೀತಿಯ ಬೆಳೆ ವಿಮೆ ಮೊತ್ತ ನಿಗದಿಯಾಗುತ್ತಿದೆ. ವಿಮಾ ಕಂಪನಿಯ ಪ್ರತಿನಿಧಿಗಳು ಆಯಾ ಜಿಲ್ಲೆಯ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯಲ್ಲಿ ಲಭ್ಯವಾಗುವಂತೆ ಕ್ರಮ ಆಗಬೇಕು. ಕಳೆದ ಸಾಲಿನ ಹಾನಿಗೆ ಸಂಬಂಧಿಸಿದಂತೆ ತಕ್ಷಣ ಬೆಳೆ ವಿಮೆ ಹಣ ಪಾವತಿಗೆ ಸರಕಾರ ಕ್ರಮ ಕೈಗೊಳ್ಳಬೇಕೆಂದು ದ್ರಾಕ್ಷಿ ರೈತರು ಒತ್ತಾಯಿಸಿದ್ದಾರೆ.
ಪ್ರಸಕ್ತ ಸಾಲಿನ ಬೆಳೆಗೆ ಖರ್ಚು ಮಾಡಲು ರೈತರು ತೊಂದರೆಯಲ್ಲಿದ್ದಾರೆ. ತಕ್ಷಣ ಬೆಳೆ ವಿಮೆ ಬಿಡುಗಡೆ ಮಾಡಿಸಬೇಕು. ಫಸಲ್ ಬಿಮಾ ಯೋಜನೆಗೆ ದ್ರಾಕ್ಷಿ ಬೆಳೆಯನ್ನು ಸೇರಿಸಬೇಕು. ಎಂದು ದ್ರಾಕ್ಷಿ ಬೆಳೆಗಾರರು ತಿಳಿಸಿದ್ದಾರೆ.