ಬೆಂಗಳೂರು: ಪವರ್ ಶೇರಿಂಗ್ ವಿಚಾರಕ್ಕೆ ಸಿಎಂ ಮತ್ತು ಡಿಸಿಎಂ ನಡುವೆ ಕೋಲ್ಡ್ವಾರ್ಗೆ ಸೈರನ್ ಮೊಳಗೇ ಎರಡೇ ದಿನದಲ್ಲಿ ಸೀಸ್ಫೈರ್ಗೆ ಡಿಕೆಶಿ ಸೈನ್ ಮಾಡಿದ್ದಾರೆ. ಸಿಎಂ ಮಾತೇ ಶಾಸನ ಅಂತ ಸಾರಿದ ರಾಜ್ಯ ಕಾಂಗ್ರೆಸ್ನ ಕಟ್ಟಪ್ಪ ಡಿ.ಕೆ.ಶಿವಕುಮಾರ್, ಸಿಎಂ ಬೆನ್ನಿಗೆ ಬಂಡೆಯಂತೆ ಸಾಯುವವರೆಗೆ ಇರುತ್ತೇನೆ ಅಂತ ಹೇಳಿದ್ದಾರೆ.
ಈ ಮೂಲಕ ಚಾಣಾಕ್ಷ ಡಿಕೆಶಿ ತಮ್ಮ ಚದುರಂಗದಾಟ, ರಾಂಗ್ಟರ್ನ್ ಅಂತ ಅರಿತು ಯೂಟರ್ನ್ ಹೊಡೆದಿದ್ದಾರೆ. ಆದ್ರೆ, ಈ ಯೂಟರ್ನೇ ಈಗ ಹಲವರ ತಲೆಯಲ್ಲಿ ಹುಳ ಬಿಟ್ಟಿದೆ.
ರಾಜ್ಯ ಕಾಂಗ್ರೆಸ್ನಲ್ಲಿ ಅರಸೊತ್ತಿಗೆಗಾಗಿ ನಡೆಯುತ್ತಿರುವ ಕೋಲ್ಡ್ವಾರ್. ಬಂಡೆ ಎಸೆದ ಒಪ್ಪಂದ ಬಾಂಬ್ಗೆ ಕಾಂಗ್ರೆಸ್ ಪಡೆ ಶೇಕ್ ಆಗ್ತಿದೆ. ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಈ ವಿಷಯ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ಕುರ್ಚಿಗಾಗಿ ರೋಶಾಗ್ನಿ ಹೊಗೆ ಏಳುವ ಭೀತಿ ಎಬ್ಬಿಸಿ ಆತಂಕದ ಛಾಯೆ ಮೂಡಿಸಿತ್ತು. ಆದ್ರೆ, ಕನಕಪುರ ಬಂಡೆ, ಏಕಾಏಕಿ ತಮ್ಮ ಪಾಲಿಟಿಕ್ಸ್ಗೆ ಕದನವಿರಾಮ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.
ಅಧಿಕಾರ ಹಂಚಿಕೆ ಎಂದಿದ್ದ ಡಿಕೆಶಿ ಬಗ್ಗೆ ಸಿಎಂ ಕ್ಯಾಂಪ್ ಸಿಡಿಮಿಡಿ ಆಗಿದೆ. ಸದ್ಯ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ, ಸಚಿವ ಸಂಪುಟದ ಇತರ ಸಚಿವರು ತಿರುಗಿಬಿದ್ರೆ ಡಿಕೆಶಿಗೆ ಕಷ್ಟವಾಗಲಿದೆ. ಈ ಕಾರಣಕ್ಕೆ ತನ್ನ ಹೇಳಿಕೆಯಿಂದ ಆಗ್ತಿರೋ ಚರ್ಚೆಗೆ ಬ್ರೇಕ್ ಹಾಕುವ ಅಗತ್ಯ ಇದೆ ಅಂತ ಡಿಕೆಶಿಗೆ ಅನಿಸಿದೆ. ಅಲ್ಲದೆ, ಸಿದ್ದರಾಮಯ್ಯರನ್ನ ಎದುರು ಹಾಕಿಕೊಂಡ್ರೆ ಸಿಎಂ ಸ್ಥಾನ ಕಷ್ಟಸಾಧ್ಯ ಅನ್ನೋದು ಚಾಣಾಕ್ಷ ಕನಕಪುರ ಬಂಡೆಗೆ ಗೊತ್ತಿಲ್ಲದ್ದೇನಿಲ್ಲ.
ಒಪ್ಪಂದದ ಪಟಾಕಿ ಸಿಡಿಸಿ ಸ್ನೇಹದ ಅಸ್ತ್ರ ಪ್ರಯೋಗಿಸಿದ್ದ ಡಿಕೆಶಿ, ನಿನ್ನೆ ಪ್ರಚಂಡ ರಾಮಯ್ಯನ ಶಕ್ತಿಪ್ರದರ್ಶನ ಕಂಡು ಬೆಚ್ಚಿಬಿದ್ದಿದ್ದಾರೆ. ಸಿದ್ದು ಪವರ್ಶೋನಲ್ಲೇ ಡಿಕೆಶಿ ಬೆಂಬಲದ ಭರವಸೆ ನೀಡಿ, ಹೋರಾಟದ ಕಿಚ್ಚಿಗೆ ಅರ್ಧ ನೀರು ಹಾಯಿಸಿದ್ದಾರೆ.. ಆದ್ರೆ, ಬೆಂಕಿ ಮಾತ್ರ ಒಳಗೊಳಗೆ ಉರೀತಾನೆ ಇದೆ. ಅಷ್ಟಕ್ಕೂ ಡಿಕೆಶಿ ಹೀಗೆ ದಿಢೀರ್ ತಮ್ಮ ಡೈರೆಕ್ಷನ್ ಚೇಂಜ್ ಮಾಡಲು ಕಾರಣ ತುಂಬಾ ಇಂಟ್ರಸ್ಟಿಂಗ್.
ರಾಜ್ಯದಲ್ಲಿ ಸಿದ್ದು ಪಡೆ ಬಲಿಷ್ಠವಾಗಿದೆ. ನಾಜೂಕಾಗಿ ಪರಿಸ್ಥಿತಿ ನಿಭಾಯಿಸುವ ಅನಿವಾರ್ಯತೆ ಸೃಷ್ಟಿಸಿದೆ. ಭವಿಷ್ಯದಲ್ಲಿ ಒಂದ್ವೇಳೆ ಸಿಎಂ ಸ್ಥಾನಕ್ಕಾಗಿ ಒಪ್ಪದೇ ಸಿಎಂ ಸಿಡಿದು ನಿಂತ್ರೆ ಹೈಕಮಾಂಡ್ ಕೂಡ ಕೈಚೆಲ್ಲುವ ಆತಂಕ ಡಿಕೆಶಿಗೆ ಕಾಡ್ತಿದೆ. ಈ ಕಾರಣ ಬಂಡೆಯಂತೆ ನಿಲ್ತೀನಿ ಅನ್ನೋ ಹೇಳಿಕೆ ಸಮಾವೇಶದಲ್ಲಿ ಪ್ರಕಟ ಆಗಿದೆ.