ಬೆಂಗಳೂರು ಗ್ರಾಮಾಂತರ: ರಾಜ್ಯದಲ್ಲಿ ಸತತವಾಗಿ ಮಳೆಯಾಗುವುದರ ಪರಿಣಾಮ ತರಕಾರಿ ದುಬಾರಿಯಾಗಿ ಗ್ರಾಹಕರ ಬೆಲೆ ಏರಿಕೆ ಬಿಸಿ ತಟ್ಟಿದೆ. ತರಕಾರಿ ಸರಬರಾಜು ಕಡಿಮೆಯಾಗಿದೆ. ಬೆಳೆದಿದ್ದ ತರಕಾರಿ ಅತಿ ಹೆಚ್ಚು ತೇವಾಂಶ ಹಾಗೂ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತೋಟದಲ್ಲಿಯೇ ಹಾನಿಯಾಗುತ್ತಿದೆ. ಈ ಎಲ್ಲಾ ಕಾರಣಗಳಿಂದ ತರಕಾರಿಗಳ ದರ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ ಎಂದು ವರದಿ ತಿಳಿಸಿದೆ.
ಟೊಮೆಟೊ, ಸೊಪ್ಪು, ಹೂ ಬೆಳೆಗಳಲ್ಲಿ ರೋಗ ಬಾಧೆ ಕಾಣಿಸಿಕೊಂದಿರುವುದರಿಂದ ಹೆಚ್ಚು ಹಣ ಕೊಟ್ಟರೂ ಗುಣಮಟ್ಟದ ತರಕಾರಿ ಸಿಗದಂತಾಗಿದೆ. ಕಡಿಮೆ ಗುಣಮಟ್ಟದ ತರಕಾರಿಯನ್ನು ಅತಿ ಹೆಚ್ಚು ಬೆಲೆಗೆ ಖರೀದಿಸುವಂತಾಗಿರುವ ಗ್ರಾಹಕರು ಅಳೆದು ತೂಗಿ ತರಕಾರಿ ಖರೀದಿಸುತ್ತಿದ್ದಾರೆ.
ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹೊಸದಾಗಿ ತರಕಾರಿ ಬೆಳೆ ನಾಟಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಾರುಕಟ್ಟೆಗೆ ಅಗತ್ಯವಾದಷ್ಟು ತರಕಾರಿ ಸರಬರಾಜಾಗುತ್ತಿಲ್ಲ.
ಕೆಲವೆಡೆ ಫಸಲು ಕುಸಿತವಾಗಿದ್ದರೆ, ಕೆಲವೆಡೆ ಬೆಳೆ ಹಾನಿಯಾಗಿದೆ. ಬಹುತೇಕ ತರಕಾರಿಗಳ ದರವೂ 50 ರೂ. ಮೇಲೆಯೇ ಇದೆ. ಬದನಕಾಯಿ, ಎಲೆ ಕೋಸು ಸೇರಿದಂತೆ ಬಹುತೇಕ ತರಕಾರಿಗಳ ದರ 20 ರಿಂದ 40ರೂ.ವರೆಗೂ ಏರಿಕೆ ಕಂಡಿದೆ.
‘ನಿರಂತರ ಮಳೆಯಿಂದಾಗಿ ಟೊಮೇಟೋ, ಹೂಗಳ ಗುಣಮಟ್ಟದ ಮೇಲೆ ಕೊಂಚ ಪರಿಣಾಮ ಬೀರಿದೆ. ಸದ್ಯಕ್ಕೆ ಎಲ್ಲೂ ಬೆಳೆ ಹಾನಿ ಸಂಭವಿಸಿಲ್ಲ.
ಮಳೆ ಇದೇ ರೀತಿ ಮುಂದುವರಿದರೆ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆಯಿದೆ’ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹೇಳಿದ್ದಾರೆ.
ಟೊಮೇಟೋ ಸೇರಿದಂತೆ ಬಹುತೇಕ ಎಲ್ಲ ತರಕಾರಿ ದುಬಾರಿ ಪ್ರತಿ ಕೆಜಿ ಟೊಮೇಟೋ 60 ರಿಂದ 80 ರೂ.ವರೆಗೆ ಮಾರಾಟವಾಗುತ್ತಿದೆ. ಬೀನ್ಸ್ ಕೂಡ 80 ರೂ. ದಾಟಿದೆ.
‘ಮಳೆಯಿಂದ ಹಲವೆಡೆ ಬೆಳೆಗಳಿಗೆ ಹಾನಿಯಾಗಿದೆ ಎಂದು ವಿಎನ್ಆರ್ ಸೀಡ್ಸ್ ವ್ಯವಸ್ಥಾಪಕ ಸಂಪತ್ ಹೇಳಿದ್ದಾರೆ.