ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂ ಧಾರ್ಮಿಕ ಗುರು ಚಿನ್ಮಯ್ ಕೃಷ್ಣ ದಾಸ್(Chinmoy Krishna Das) ಅವರ ಬಂಧನ ಪ್ರಪಂಚಾದ್ಯಂತ ಸುದ್ದಿಯಾಗುತ್ತಿರುವ ಬೆನ್ನಲ್ಲೇ ಇಸ್ಕಾನ್ನ ಮತ್ತಿಬ್ಬರು ಸನ್ಯಾಸಿಗಳನ್ನು(ISKCON Monks Arrested) ಅರೆಸ್ಟ್ ಮಾಡಲಾಗಿದೆ.
ನವೆಂಬರ್ 25 ರಂದು, ರಾಷ್ಟ್ರಧ್ವಜಕ್ಕೆ ಅಗೌರವದ ಆರೋಪದ ಮೇಲೆ ದೇಶದ್ರೋಹದ ಆರೋಪದ ಮೇಲೆ ಚಿನ್ಮಯ್ ಕೃಷ್ಣ ದಾಸ್ ಅವರನ್ನು ಬಂಧಿಸಲಾಯಿತು. ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯವು ಅವರಿಗೆ ಜಾಮೀನು ನಿರಾಕರಿಸಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತಿಬ್ಬರು ಇಸ್ಕಾನ್ನ ಸನ್ಯಾಸಿಗಳನ್ನು ಅರೆಸ್ಟ್ ಮಾಡಲಾಗಿದೆ.
ದೇಶಾದ್ಯಂತ ಹಿಂದೂಗಳ ಪರವಾಗಿ ನಡೆಯುತ್ತಿರುವ ಪ್ರತಿಭಟನೆಗೆ ಕುಮ್ಮಕ್ಕು ನೀಡಿರುವ ಆರೋಪದಲ್ಲಿ ಇವರಿಬ್ಬರನ್ನು ಬಂಧಿಸಲಾಗಿದೆ.
ಮತ್ತೊಬ್ಬ ಇಸ್ಕಾನ್ ಸನ್ಯಾಸಿ ಬ್ರಹ್ಮಚಾರಿ ಶ್ಯಾಮ್ ದಾಸ್ ಅವರನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿರುವ ಬಗ್ಗೆ ಕೇಳಿ ಬೇಸರವಾಯಿತು. ಇತ್ತೀಚೆಗಷ್ಟೇ ಬಂಧನಕ್ಕೊಳಗಾಗಿದ್ದ ಚಿನ್ಮೋಯ್ ಕೃಷ್ಣ ಪ್ರಭು ಅವರನ್ನು ಭೇಟಿ ಮಾಡಲು ತೆರಳಿದ್ದ ವೇಳೆ ಅವರನ್ನು ಬಂಧಿಸಲಾಗಿತ್ತು.
ಬಾಂಗ್ಲಾದೇಶದಲ್ಲಿ ಶಾಂತಿಯುತ ಧಾರ್ಮಿಕ ವ್ಯಕ್ತಿಗಳು ಮತ್ತು ಹಿಂದೂ ಅಲ್ಪಸಂಖ್ಯಾತರ ವಿರುದ್ಧ ಇಂತಹ ಕ್ರಮಗಳು ಆಳವಾಗಿ ಕಳವಳಕಾರಿಯಾಗಿದೆ. ಇದು ನಾವೆಲ್ಲರೂ ನಿಂತಿರುವ ನ್ಯಾಯ ಮತ್ತು ಸಾಮರಸ್ಯದ ಮೌಲ್ಯಗಳಿಗೆ ವಿರುದ್ಧವಾಗಿದೆ.
ಈ ಸನ್ಯಾಸಿಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ನಾನು ಬಾಂಗ್ಲಾದೇಶ ಸರ್ಕಾರವನ್ನು ಒತ್ತಾಯಿಸುತ್ತೇನೆ. ನಾವೆಲ್ಲರೂ ನ್ಯಾಯ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತುವುದು ಮುಖ್ಯವಾಗಿದೆ ಎಂದು ಸುಕಾಂತ ಮಜುಂದಾರ್ ಅವರು ಟ್ವೀಟ್ ಮುಖಾಂತರ ತಿಳಿಸಿದ್ದಾರೆ.
ರುದ್ರಪ್ರೋತಿ ಕೇಶಬ್ ದಾಸ್ ಮತ್ತು ರಂಗನಾಥ್ ಶ್ಯಾಮ ಸುಂದರ್ ದಾಸ್ ಅವರನ್ನು ಬಾಂಗ್ಲಾದೇಶದಲ್ಲಿ ಅರೆಸ್ಟ್ ಆಗಿರುವ ಸನ್ಯಾಸಿಗಳು. ಇನ್ನು ಸರ್ಕಾರದ ಈ ಕ್ರಮವನ್ನು ಇಸ್ಕಾನ್ ಕೋಲ್ಕತ್ತಾದ ಉಪಾಧ್ಯಕ್ಷ ಮತ್ತು ವಕ್ತಾರ ರಾಧಾರಾಮನ್ ದಾಸ್ ಖಂಡಿಸಿದ್ದಾರೆ. 150ಕ್ಕೂ ಹೆಚ್ಚು ದೇಶಗಳಲ್ಲಿ ಇಸ್ಕಾನ್ ಭಕ್ತರು ಬಾಂಗ್ಲಾದೇಶಿ ಅಲ್ಪಸಂಖ್ಯಾತರ ಸುರಕ್ಷತೆಗಾಗಿ ಜಪ ಮಾಡಲು ಮತ್ತು ಪ್ರಾರ್ಥಿಸಲು ಸೇರುತ್ತಾರೆ ಎಂದು ಹೇಳಿದರು.
150 ಕ್ಕೂ ಹೆಚ್ಚು ದೇಶಗಳಲ್ಲಿ ಮತ್ತು ಲೆಕ್ಕವಿಲ್ಲದಷ್ಟು ನಗರಗಳು ಮತ್ತು ಪಟ್ಟಣಗಳಲ್ಲಿ, ವಿಶ್ವದಾದ್ಯಂತ ಲಕ್ಷಾಂತರ ಇಸ್ಕಾನ್ ಭಕ್ತರು ಡಿಸೆಂಬರ್ 1ರಂದು ಬಾಂಗ್ಲಾದೇಶದ ಅಲ್ಪಸಂಖ್ಯಾತರ ಸುರಕ್ಷತೆಗಾಗಿ ಪ್ರಾರ್ಥಿಸಲು ಮತ್ತು ಜಪಿಸಲು ಒಟ್ಟುಗೂಡುತ್ತಾರೆ. ದಯವಿಟ್ಟು ನಿಮ್ಮ ಸ್ಥಳೀಯ ಇಸ್ಕಾನ್ ದೇವಸ್ಥಾನ ಅಥವಾ ಸಭೆಗೆ ಸೇರಿಕೊಳ್ಳಿ. ಹರೇ ಕೃಷ್ಣ!” ಎಂದು ರಾಧಾರಾಮನ್ ದಾಸ್ ಟ್ವೀಟ್ ಮಾಡಿದ್ದಾರೆ.