ಬೆಂಗಳೂರಿನ ಕ್ರೆಸೆಂಟ್ ರಸ್ತೆಯ ಗುರುರಾಜ ಕಲ್ಯಾಣ ಮಂಟಪದಲ್ಲಿ ನಾಳೆ ಮಧ್ಯಾಹ್ನ ಕೆಎಫ್ಸಿಸಿ ಚುನಾವಣೆ ನಡೆಯಲಿದೆ.
ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್ಸಿಸಿ) 2024-25ನೇ ಸಾಲಿನ ಚುನಾವಣೆ ಘೋಷಿಸಿದ್ದು, ನಾಳೆ ಗುರುರಾಜ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ 2:00ರಿಂದ ಸಂಜೆ 6:00ರವರೆಗೆ ಮತದಾನ ನಡೆಯಲಿದೆ. ಚಲನಚಿತ್ರೋದ್ಯಮದ ಪ್ರಮುಖ ಸಂಸ್ಥೆಗೆ ಹೊಸ ನಾಯಕನನ್ನು ಈ ಚುನಾವಣೆ ನಿರ್ಧರಿಸಲಿದೆ.
ನರಸಿಂಹಲು ತಮ್ಮ ಹೇಳಿಕೆಯಲ್ಲಿ, ಕನ್ನಡ ಚಲನಚಿತ್ರೋದ್ಯಮಕ್ಕೆ ತಮ್ಮ ಸಮರ್ಪಣಾಭಾವವನ್ನು ಒತ್ತಿ ಹೇಳಿದ್ದಾರೆ. ತಾವು ಆಯ್ಕೆಯಾದರೆ ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರ ಕಲ್ಯಾಣಕ್ಕಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ. “ಸಿನಿಮಾ ನನ್ನ ಜೀವನ ಮತ್ತು ನನ್ನ ಕುಟುಂಬ. ಎಂದೆಂದಿಗೂ ಈ ಉದ್ಯಮಕ್ಕೆ ಬದ್ಧ. ಪ್ರಾಮಾಣಿಕತೆ ಮತ್ತು ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಲು ನನಗೊಂದು ಅವಕಾಶ ನೀಡುವಂತೆ ನಾನು ಎಲ್ಲರಲ್ಲೂ ಮನವಿ ಮಾಡುತ್ತೇನೆ” ಎಂದು ತಿಳಿಸಿದ್ದಾರೆ.
ಕನ್ನಡ ಚಿತ್ರರಂಗದ ಅನುಭವಿ ಎಂ.ನರಸಿಂಹಲು ಅವರು ಅಧ್ಯಕ್ಷ ಸ್ಥಾನಕ್ಕೆ ತಮ್ಮ ಉಮೇದುವಾರಿಕೆ ಘೋಷಿಸಿದ್ದಾರೆ. ಇವರು ನಾಲ್ಕು ದಶಕಗಳ ಕಾಲ ನಿರ್ಮಾಪಕ, ವಿತರಕ, ಪ್ರದರ್ಶಕರಾಗಿ ಮತ್ತು ಕೆಎಫ್ಸಿಸಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೇ, ಡಾ.ರಾಜ್ಕುಮಾರ್, ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರಂತಹ ಹೆಸರಾಂತ ನಟರೊಂದಿಗೆ ಕೆಲಸ ಮಾಡಿದ ಅನುಭವವಿದೆ.